ಸಮಗ್ರ ನ್ಯೂಸ್: ಲೋಕಸಭೆ ಕಲಾಪದ ವೇಳೆ ಭದ್ರತಾ ಲೋಪ ಪ್ರಕರಣದ ತನಿಖೆ ಚುರುಕುಗೊಂಡಿದೆ. ದೆಹಲಿ ಪೊಲೀಸರು ಪ್ರಕರಣದಲ್ಲಿ ಬಂಧಿಯಾಗಿದ್ದ ಮೈಸೂರು ಮೂಲದ ಮನೋರಂಜನ್ ಅವರ ಸಂಬಂಧಿಕರನ್ನ ವಿಚಾರಣೆ ನಡೆಸಿದ್ದರು. ಇದರ ಬೆನ್ನಲ್ಲೇ ಇಂದು ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಡಿವೈಎಸ್ಪಿ ಪುತ್ರನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಲೋಕಸಭೆಯಲ್ಲಿ ಮನೋರಂಜನ್ ಹಾಗೂ ಇತರರಿಂದ ಸ್ಪ್ರೇ ದಾಳಿ ಪ್ರಕರಣದ ಲಿಂಕ್ ಬಾಗಲಕೋಟೆಗೂ ಸಾಗಿದ್ದು, ಬಾಗಲಕೋಟೆ ನಿವೃತ್ತ ಡಿವೈಎಸ್ ಪಿ ಮಗ ಸಾಯಿಕೃಷ್ಣ ಎಂಬಾತನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಾಯಿಕೃಷ್ಣ ಆರೋಪಿ ಮನೋರಂಜನ್ ಸ್ನೇಹಿತನಾಗಿದ್ದು, ಬೆಂಗಳೂರಿನ ಬಿಐಟಿ ಇಂಜಿನಿಯರಿಂಗ್ ಕಾಲೇಜುನಲ್ಲಿ ಸಹಪಾಠಿಯಾಗಿದ್ದನಂತೆ. ಅಲ್ಲದೇ, ಮನೋರಂಜನ್ ಮತ್ತು ಸಾಯಿಕೃಷ್ಣ 2008 -2009ರ ಅವಧಿಯಲ್ಲಿ ರೂಮ್ ಮೇಟ್ ಆಗಿದ್ದರು. 2012ರಲ್ಲಿ ದೆಹಲಿಗೆ ಹೋಗಿದ್ದ ಮನೋರಂಜನ್ ಡೈರಿಯಲ್ಲಿ ಸಾಯಿಕೃಷ್ಣ ಹೆಸರು ಬರೆದಿನಂತೆ ಎನ್ನಲಾಗಿದೆ. ಸಾಯಿಕೃಷ್ಣ ಸದ್ಯ ಎನ್ರಿಚ್ ವಿಡಿಯೊ ಕಂಪನಿ ಸೀನಿಯರ್ ಸಾಪ್ಟವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಂಜೆ 7 ಗಂಟೆಗೆ ವೇಳೆಗೆ ಬಾಗಲಕೋಟೆಗೆ ಬಂದಿರುವ ದೆಹಲಿ ಕಮೀಷನರೇಟ್ ಪೊಲೀಸರು ಸಾಯಿಕೃಷ್ಣನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ದೆಹಲಿ ಪಿಎಸ್ಐ ಪಿಂಟು ಶರ್ಮಾ ಹಾಗೂ ನಾಲ್ಕು ಜನರ ತಂಡ ವಿದ್ಯಾಗಿರಿ ಮನೆಗೆ ಭೇಟಿ ನೀಡಿ ನಿವೃತ್ತ ಡಿವೈಎಸ್ ಪಿ ವಿಠ್ಠಲ ಜಗಲಿ ಅವರ ಪುತ್ರ ಸಾಯಿಕೃಷ್ಣರನ್ನು ವಶಕ್ಕೆ ಪಡೆದುಕೊಂಡಿದೆ. ಆ ಬಳಿಕ ನವನಗರ ಠಾಣೆಯಲ್ಲಿ ಕೆಲ ಕಾಲ ವಿಚಾರಿಣೆ ನಡೆಸಿ ಡೆಲ್ಲಿಗೆ ಕರೆದೊಯ್ದ ಹೋಗಿದ್ದಾರೆ ಎನ್ನಲಾಗಿದೆ
ಸಾಯಿಕೃಷ್ಣ ಅವರನ್ನು ವಶಕ್ಕೆ ಪಡೆದ ಕುರಿತು ಸಹೋದರಿ ಸ್ಪಂದನಾ, ನಮ್ಮ ಸಹೋದರ ಯಾವುದೇ ತಪ್ಪು ಮಾಡಿಲ್ಲ. ಆತ ಮನೋರಂಜನ್ ಸ್ನೇಹಿತ ಮಾತ್ರ, ಸ್ನೇಹಿತನಾದ ಕಾರಣ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ಎಲ್ಲಾ ತನಿಖೆಗೆ ನಾವು ಸಿದ್ದರಿದ್ದೇವೆ. ತಪ್ಪೇ ಮಾಡಿಲ್ಲ ಅಂದರೆ ಹೆದರೋದೆಕ್ಕೆ, ಎರಡು ದಿನದಿಂದ ದೆಹಲಿ ಪೊಲೀಸರು ಬಂದು ವಿಚಾರಣೆ ನಡೆಸಿದ್ದಾರೆ. ಎಲ್ಲದಕ್ಕೂ ಸಹಕರಿಸಿದ್ದೇವೆ. ನಮ್ಮ ಸಹೋದರ ನಿರಪರಾಧಿ, ಮನೆಯಿಂದ ವರ್ಕ್ ಪ್ರಾಮ್ ಹೋಮ್ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿಸಿದರು


















