ಸಮಗ್ರ ನ್ಯೂಸ್: ಯುವತಿಯೊಬ್ಬಳ ಜೊತೆ ಮಾತನಾಡಿದ್ದಾನೆ ಎಂಬ ಕಾರಣಕ್ಕೆ ಮುಸ್ಲಿಂ ಯುವಕನನ್ನು ತಂಡವೊಂದು ಬಸ್ಸಿನಿಂದ ಹೊರಗೆಳೆದು ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಮಂಗಳವಾರ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಕಕ್ಕಿಂಜೆ ನಿವಾಸಿ ಸಾಹಿಲ್ (22) ಎಂದು ಗುರುತಿಸಲಾಗಿದೆ.
ಸಾಹಿಲ್ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು ಇಂದು ಊರಿಗೆ ಬಸ್ಸಿನಲ್ಲಿ ಬರುತ್ತಿದ್ದ ವೇಳೆ ತನ್ನ ಪರಿಚಯದ ಯುವತಿಯೊಂದಿಗೆ ಒಂದೇ ಸೀಟಿನಲ್ಲಿ ಕುಳಿತು ಮಾತನಾಡುತ್ತಾ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ. ಬೆಳ್ತಂಗಡಿ ತಲುಪುವ ವೇಳೆಗೆ ಆಕೆ ಇಳಿದಿದ್ದು, ಬಸ್ಸಿನಲ್ಲಿ ಇವರನ್ನು ಗಮನಿಸಿ ಯಾರೋ ಉಜಿರೆಯ ಯುವಕರಿಗೆ ಮಾಹಿತಿ ನೀಡಿದ್ದು ಈತನನ್ನು ಉಜಿರೆಯಲ್ಲಿ ಕಾದು ನಿಂತಿದ್ದ ಯುವಕರ ತಂಡ ಬಸ್ಸಿನಿಂದ ಹೊರಗೆಳೆದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಗೆ ಒಳಗಾಗಿರುವ ಸಾಹಿಲ್ ಬೆಳ್ತಂಗಡಿ ಸರಕಾರಿ ಅಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದು ಬೆಳ್ತಂಗಡಿ ಪೊಲೀಸರು ಇದೀಗ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಯುವಕನಿಂದ ಮಾಹಿತಿ ಪಡೆದುಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಸಾಹಿಲ್ ದಾಖಲಾದ ಆಸ್ಪತ್ರೆಗೆ ಎಸ್.ಡಿ.ಪಿ ಐ ಪಕ್ಷದ ತಾಲೂಕು ಅಧ್ಯಕ್ಷ ನವಾಜ್ ಕಟ್ಟೆ ಹಾಗೂ ಇತರ ಮುಖಂಡರುಗಳು ಭೇಟಿ ನೀಡಿದ್ದು, ಆತನಿಗೆ ಧೈರ್ಯ ತುಂಬಿದ್ದಾರೆ.






