ಮಂಗಳೂರು: ಮಂಗಳೂರು ನಗರ ಹೊರವಲಯದ ಅಡ್ಡೂರು ಸಮೀಪದ ಕಾಜಿಲ ಎಂಬಲ್ಲಿ ನಿನ್ನೆ ನಡೆದ ರಿಕ್ಷಾ ಮತ್ತು ಟಿಪ್ಪರ್ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಾಗೊಂಡಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾಳೆ
ಮೃತಪಟ್ಟ ಯುವತಿಯನ್ನು ಕರಿಯಂಗಳ ಗ್ರಾಮದ ಪಳ್ಳಿಪಾಡಿಯ ಆಸ್ನಾ (18) ಎಂದು ಗುರುತಿಸಲಾಗಿದೆ. ಈಕೆ ನಿನ್ನೆ ತನ್ನ ತಾಯಿ ರೆಹನಾರೊಂದಿಗೆ ರಿಕ್ಷಾದಲ್ಲಿ ಗುರುಪುರ ಕೈಕಂಬದತ್ತದಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ವೇಳೆ ಪೊಳಲಿ ದ್ವಾರದಿಂದ ಅಡ್ಡೂರಿನತ್ತ ಅತಿ ವೇಗದಿಂದ ಚಲಿಸುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ. ಪರಿಣಾಮ ಇವರಿಬ್ಬರಿದ್ದ ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿ, ಇವರು ರಸ್ತೆಯ ಪಕ್ಕಕ್ಕೆ ಎಸೆಯಲ್ಪಟ್ಟಿದ್ದು, ಘಟನೆಯಲ್ಲಿ ತಾಯಿ ಮತ್ತು ಮಗಳು ಗಂಭೀರ ಗಾಯಗೊಂಡಿದ್ದರು.
ಗಂಭೀರ ಗಾಯಗೊಂಡಿದ್ದ ತಾಯಿ, ಮಗಳು ಹಾಗೂ ರಿಕ್ಷಾ ಚಾಲಕನನ್ನು ಸ್ಥಳೀಯರು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ನಾ ಇಂದು ಸಾವನ್ನಪ್ಪಿದ್ದಾಳೆ. ಘಟನೆಯ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















