ಮಂಗಳೂರು: ಜ.ಬಿಪಿನ್ ರಾವತ್ ಸಾವನ್ನು ಸಂಭ್ರಮಿಸಿ ವಿಕೃತಿ| ಆರೋಪಗಳ ವಿರುದ್ಧ ಕ್ರಮ ಕೈಗೊಳ್ಳಲು ಗೃಹಸಚಿವರ ಸೂಚನೆ|

Ad Widget ... ..

ಮಂಗಳೂರು: ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸಾವನ್ನು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸಿದ ಆರೋಪದಲ್ಲಿ ಮೂರು ಫೇಸ್‌ಬುಕ್ ಖಾತೆಗಳು ಹಾಗೂ ಅದನ್ನು ನಿರ್ವಹಿಸುತ್ತಿದ್ದ ವ್ಯಕ್ತಿಗಳ ಮೇಲೆ ಮಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ.

Ad Widget

ಮಂಗಳೂರಿನ ಸ್ಥಳೀಯ ನಿವಾಸಿ ಸುಶಾಂತ್ ಪೂಜಾರಿ ಎಂಬುವರು ನೀಡಿದ ದೂರಿನ ಮೇಲೆ ಬೆಂಗಳೂರು ಮೂಲದ ವಸಂತ ಕುಮಾರ್ ಟಿ.ಕೆ ಹಾಗೂ ಶ್ರೀನಿವಾಸ ಕಾರ್ಕಳ ಎಂಬುವರ ಫೇಸ್‌ಬುಕ್ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನೊಂದು ಖಾತೆ ಅಪರಿಚಿತ ವ್ಯಕ್ತಿಗೆ ಸೇರಿದ್ದಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಬಿಪಿನ್ ರಾವತ್ ಸಾವಿನ ಸಂಭ್ರಮಾಚರಣೆ ಮಾಡುವುದನ್ನು ಸಹಿಸಲಾಗದು. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಸೂಚನೆ ನೀಡಿದ್ದರು. ಅದೇ ರೀತಿ ಸದ್ಯಕ್ಕೆ ಮೂರು ಫೇಸ್‌ಬುಕ್ ಪೋಸ್ಟ್‌ಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆ ಖಾತೆಗಳು ಯಾರದ್ದು, ಅವುಗಳ ಮೂಲ, ಅವು ಅಸಲಿ ಖಾತೆಗಳೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ವಸಂತ್ ಕುಮಾರ್ ಟಿ.ಕೆ. ಎಂಬಾತ ತನ್ನ ಫೇಸ್‌ಬುಕ್ ಖಾತೆಯಲ್ಲಿ, “”ಬಿಪಿನ್ ರಾವತ್ ಮೋದಿ ಗುಲಾಮತನದ ಒಂದು ತಲೆಮಾರು, ಚೈನಾ ಬಂದು ಹಳ್ಳಿಗಳನ್ನು ನಿರ್ಮಿಸಿದಾಗಲೂ ಮೋದಿಯಂತೆ ಬುಡುಬುಡಿಕೆ ಹೇಳಿಕೆ ಕೊಟ್ಟ ವ್ಯಕ್ತಿ. ಸದ್ಯಕ್ಕೆ ಅವರ ಕುಟುಂಬಕ್ಕೆ ಸಮಾಧಾನ ಸಿಗದೆ, ಅವರ ಸಾವಿನಿಂದ ದೇಶವಂತೂ ಪಾರಾಗಿದೆ. ಇವರ ಜಾಗಕ್ಕೆ ನಿಜವಾದ ಒಬ್ಬ ಗಂಡು ಮಗ ಬರುತ್ತಾನೆ ಅನ್ನೋ ನಂಬಿಕೆಯೊಂದಿಗೆ ನಾನು ಸಮಾಧಾನವಾಗಿದ್ದೇನೆ. ನಮಗೂ ಆತ್ಮಕ್ಕೂ ಸಂಬಂಧವಿಲ್ಲ. ಆದರೆ ಹಿರಿಯರಿಗೋಸ್ಕರ ಅವರ ಆತ್ಮಕ್ಕೆ ಶಾಂತಿ ಸಿಗಲಿ,” ಅಂತಾ ಬರೆದುಕೊಂಡಿದ್ದಾನೆ.

ಇನ್ನು ಸುಬ್ಬರಾವ್ ರವಿಕುಮಾರ್ ಎಂಬ ಫೇಸ್‌ಬುಕ್ ಖಾತೆಯಿಂದ “”ಫೇಕುವಿನ ನೂರಾರು ಬಾಯಿಗಳಲ್ಲಿ ಒಂದು ಸ್ತಬ್ಧವಾಗಿದೆ RIP ಅಂತಾ ಡಿ.8ರಂದು ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್‌ಗೆ ಶ್ರೀನಿವಾಸ ಕಾರ್ಕಳ ಎಂಬ ವ್ಯಕ್ತಿ “ದೋವಲ್ ಯಾವಾಗ’ ಎಂದು ಕಮೆಂಟ್ ಮಾಡಿದ್ದಾನೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸಾವನ್ನು ಬಯಸಿದ ವ್ಯಕ್ತಿ, ಜನ ಸಮುದಯದ ಜೊತೆ ಹಾಗೂ ವೈಷಮ್ಯದ ಭಾವನೆಗಳನ್ನು ಉಂಟುಮಾಡುವ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂದು ದೂರು ನೀಡಲಾಗಿದೆ.

ಭಾರತೀಯ ಸೇನಾ ಪಡೆಯ ವೀರ ಸೇನಾನಿ ಮತ್ತು ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರ ಅಕಾಲಿಕ ಸಾವಿನ ಕುರಿತು ಸಂಭ್ರಮಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದವರನ್ನು ಕೂಡಲೇ ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಜಾಲತಾಣದಲ್ಲಿ ಹರಿಬಿಡುವ ದುಷ್ಕರ್ಮಿಗಳು ದೇಶ ವಿರೋಧಿಗಳಾಗಿದ್ದು, ಅವರ ವಿಳಾಸವನ್ನು ಪತ್ತೆ ಹಚ್ಚಿ ವಿಕೃತ ಮನಸ್ಸುಗಳಿಗೆ ತಕ್ಕ ಶಿಕ್ಷೆ ಆಗಬೇಕು. ಆರೋಪಿಗಳ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅವರಿಗೆ ಸೂಚಿಸಿದ್ದಾರೆ.

ಜನರಲ್ ಬಿಪಿನ್ ರಾವತ್ ಅವರ ಅಕಾಲಿಕ ಸಾವು, ದೇಶಕ್ಕೆ ಭರಿಸಲಾಗದ ಅತೀ ದೊಡ್ಡ ನಷ್ಟ. ರಾವತ್ ಅವರು ದೇಶಕ್ಕೆ ಸಲ್ಲಿಸಿರುವ ಸೇವೆ ಅಸಾಧಾರಣ ಮತ್ತು ದಿವಂಗತರ ಬಗ್ಗೆ ವಿಕೃತ ಪೋಸ್ಟ್ ಮಾಡುವವರನ್ನು ಸಹಿಸಲಾಗದು ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *