Ad Widget

ಸುವರ್ಣ ಸ್ವಾತಂತ್ರ್ಯವಿದು, ನಾವು ನಿಜವಾಗಿಯೂ ಅನುಭವಿಸಿದ್ದೇವಾ? ಇದೇನಾ ಸ್ವಾತಂತ್ರ್ಯ?

ನಮ್ಮೆಲ್ಲಾ ಸಮಸ್ತ ಓದುಗರಿಗೆ ಸುವರ್ಣ ಸ್ವಾತಂತ್ರ್ಯ ದಿನದ ಶುಭಾಶಯಗಳು

Ad Widget . Ad Widget . Ad Widget . Ad Widget . Ad Widget . Ad Widget


ಪ್ರೀತಿಯ ಭಾರತೀಯ ಬಂಧುಗಳೇ….

Ad Widget . Ad Widget .

ಸ್ವಾತಂತ್ರ್ಯ ನಮಗೆಲ್ಲರಿಗೂ ಹೆಮ್ಮೆಯ ದಿನ. ಬ್ರಿಟೀಷರ ಸೊಕ್ಕನ್ನು ಮುರಿಯಲು ಮತ್ತು ನಮ್ಮ ದೇಶದ ಸಲುವಾಗಿ ಪ್ರಾಣ ತ್ಯಾಗ ಮಾಡಿದ ನಿಜವಾದ ಹೀರೋಗಳನ್ನು ನೆನೆದು ಭಾವುಕರಾಗುವ ಕ್ಷಣ ಈ ದಿನ. ಪ್ರತೀ ವರ್ಷ ನಾವು ಇದನ್ನೇ ಮಾಡುತ್ತಿದ್ದೇವೆಯೇ ಹೊರತು ಮುಂದಿನದ್ದನ್ನು ಯೋಚಿಸಲು ಹೋಗಲಾರೆವು. ಯಾಕೆಂದರೆ ನಮಗೆ ಗೊತ್ತಿರುವುದೇ ಇಷ್ಟು. ಅವರು ಅಷ್ಟೆಲ್ಲ ಕಷ್ಟಪಟ್ಟು ನಮಗೆ ಸ್ವಾತಂತ್ರ್ಯ ತಂದು ಕೊಟ್ಟರೆ ನಾವು, ನೀವು ಮಾಡುತ್ತಿರುವುದು ಏನು?

ನಿಜವಾಗಿ ಹೇಳುವುದಾದರೆ ಅದೆಷ್ಟೋ ಜನರಿಗೆ ದೇಶಭಕ್ತಿ ಅಂದರೇನು?, ಸ್ವಾತಂತ್ರ್ಯ ಅಂದರೆ ಯಾವುದು? ಎಂಬ ಕ್ಲ್ಯಾರಿಟಿಯೇ ಸಿಕ್ಕಿಲ್ಲ. ಯಾಕೆಂದರೆ, ನನ್ನನ್ನೂ ಸೇರಿಸಿ ಎಲ್ಲರೂ ಅವರವರ ಲಾಭಕ್ಕೋಸ್ಕರ ಅಲ್ಲದೆ ದೇಶಕ್ಕೊಸ್ಕರ ಏನಾದರೂ ಮಾಡಬೇಕೆಂಬ ಮನಸ್ಥಿತಿ ಯಾರಲ್ಲಿದೆ?

ತಾನು ದೇಶದ ಸೈನಿಕನಾಗಿ ದುಡಿದು ದೇಶಕ್ಕಾಗಿ ಸೇವೆ ಸಲ್ಲಿಸುತ್ತೇನೆ ಎಂಬ ಯುವಕರು ಹಲವಾರು ಮಂದಿ ಸಿಕ್ಕರೂ, ಅವರನ್ನು ಸೇನೆಗೆ ಕಳಿಸುವ ಮತ್ತು ತನ್ನ‌ ಮಗ ರೈತನಾಗಲಿ ಎಂದು ಬಯಸುವ ತಂದೆ ತಾಯಿಗಳು ಸಿಗುವುದು ಕೇವಲ ಬೆರಳಣಿಕೆಯಷ್ಟು ಮಾತ್ರ.

ಈಗಿನ ಪಾಲಕರಿಗೆ ತಮ್ಮ ಮಕ್ಕಳು ಲಕ್ಷಾನುಗಟ್ಟಲೆ ದುಡಿದರೆ ಸಾಕು, ಅವರು ಸೇನೆಗೆ ಹೋಗಿ ಅಥವಾ ರೈತನಾಗಿ ಸಾಯುವುದು ಅವರಿಗೆ ಅವಶ್ಯಕವಲ್ಲ. ಹಾಗಾದರೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾದರೂ ಇಂದಿಗೂ ನಮ್ಮ ದೇಶದಲ್ಲಿ ತಂದೆ, ತಾಯಿಗೆ ಇಷ್ಟವಿಲ್ಲದ್ದನ್ನು ಮಕ್ಕಳು ಮಾಡುವಂತಿಲ್ಲ. ಹಾಗೇನಾದರೂ ಅಪ್ಪಿತಪ್ಪಿ ಮಾಡಿಬಿಟ್ಟರೆ ತಂದೆ ತಾಯಿ ಮಾತು ಕೇಳದ ಅವರು ಕುಲಗೆಟ್ವವರಿಗೆ ಸಮಾನ ಎಂಬ ಭಾವನೆ. ಇಲ್ಲೇ ಮೊದಲು ಸ್ವಾತಂತ್ರ್ಯ ಹರಣವಾಗುತ್ತಿರುವುದು, ಅಲ್ಲವೇ?.

ಕೊನೆಪಕ್ಷ ತಮಗೆ ಇಷ್ಟವಾದ ಕೆಲಸವನ್ನು ಮಾಡಿ ದುಡಿಯೋಣ ಎಂದರೆ, ಅದು ನಮ್ಮ ಮನೆಯವರಿಗೆ, ಪಕ್ಕದ ಮನೆಯವರಿಗೆ, ನಮ್ಮ ಸಂಬಂಧಕರಿಗೆ ಅವರೆಲ್ಲರಿಗೂ ಇಷ್ಟವಾಗಬೇಕು. ಆಗದಿದ್ದರೆ ಅಂಥವರಿಗೆ ಅವರ ಮುಂದೆ ಬೆಲೆ ಕಡಿಮೆ. ಹೀಗಾಗಿ ಅವರಿಗೆ ನಾವು ನಮ್ಮ ಜೀವನಕ್ಕಾಗಿ ಆಯ್ಕೆ ಮಾಡಿಕೊಂಡ ದಾರಿ ಇಷ್ಟವಾಗುತ್ತೋ ಇಲ್ಲವೋ ಎಂಬ ಭಯದಿಂದಲೇ ತಮಗೆ ಬಾರದ, ಹಿಡಿಸದ ಕೆಲಸವನ್ನು ಮಾಡುತ್ತಿರುವ ಯುವಕರೇ ಹೆಚ್ಚು.

ಬಹುತೇಕ ಯುವಜನತೆ ತಾವು ಕನಸು ಕಂಡ ಉದ್ಯೋಗ ಮಾಡುವುದಕ್ಕಿಂತ ಪಾಲಕರ ಅಥವಾ ಬೇರೆಯವರ ಆಸೆಯ ಉದ್ಯೋಗ ಹಿಡಿಯುತ್ತಿರುವುದು ಇಂದಿನ ಹೊಸ ಟ್ರೆಂಡ್…!

ಹಾಗಾದರೆ ಕನಿಷ್ಠ ಪಕ್ಷ ತಮಗೆ ಇಷ್ಟವಾದ ಕೆಲಸದ ಆಯ್ಕೆ ಮಾಡಿಕೊಳ್ಳಲಾಗದೆ ಅವರಿವರ ಭಯವನ್ನು ಮನಸ್ಸಿನಲ್ಲಿಟ್ಟುಕೊಂಡು ಬದುಕುತ್ತಿರುವ ನಮ್ಮ ಯುವಕರಿಗೆಲ್ಲಿ ಸಿಕ್ಕಿದೆ ಸ್ವಾಮಿ ಸ್ವಾತಂತ್ರ್ಯ? ಹಾಗಾದರೆ ಇಂದು ನಿಜವಾಗಿಯೂ ಸ್ವಾತಂತ್ರ್ಯ ದೇಶಕ್ಕಷ್ಟೇ ಸಿಕ್ಕಿದ್ದಾ? ಅಥವಾ ನಮಗೂನಾ?

ಅಗಸ್ಟ್ 15 ಬಂತೆಂದರೆ ಸಾಕು ನಮ್ಮಲ್ಲಿರುವ ದೇಶ ಪ್ರೇಮ ಉಕ್ಕಿ ಹರಿಯುತ್ತದೆ. ಭಾರತದ ಬಗ್ಗೆ ಯಾವತ್ತೂ ತೋರದ ಪ್ರೀತಿ, ವಿಶ್ವಾಸ, ದೇಶಾಭಿಮಾನ ತನ್ನಿಂತಾನೇ ಹೊರಬರುತ್ತದೆ. ಅದರಲ್ಲೂ ಆ ದಿನ ಕೇಸರಿ, ಬಿಳಿ , ಹಸಿರು ಬಣ್ಣ ಬಳಿದುಕೊಂಡು, ತ್ರಿವರ್ಣ ಧ್ವಜ ಹಿಡಿದುಕೊಂಡು ಸಂಭ್ರಮಿಸುವವರನ್ನು ನೋಡಲು ಎರಡು ಕಣ್ಣು ಸಾಲದು. ಇನ್ನು ಅವರಲ್ಲಿ ಯಾವತ್ತೂ ಇಲ್ಲದ ದೇಶ ಪ್ರೇಮ ಕಂಡಾಗ ಅವರಿಗೆ ಆ ದಿನ ಮಾತ್ರ ಸ್ವಾತಂತ್ರ್ಯ ದೊರೆತಿದೆಯೆನೋ ಎಂಬ ಸಂಶಯ ಮೂಡುವುದು ಸಹಜ!

ಹಾಗಾದರೆ ಈ ದೇಶದಲ್ಲಿ ಬದುಕುತ್ತಿರುವ ಮತ್ತು ಈ ದೇಶದಲ್ಲಿ ಹುಟ್ಟಿರುವ ಪ್ರತಿಯೊಂದು ಪ್ರಜೆಗಳಿಗೂ ನಿಜವಾಗಿಯೂ ದೇಶಭಕ್ತಿ ಇದೆಯಾ? ಅಥವಾ ಬರೀ ತೋರಿಕೆಗೋಸ್ಕರ “ಮೇರಾ ಭಾರತ್ ಮಹಾನ್” ಎಂದು ಹೇಳಿಕೊಳ್ಳಬೇಕಾದ ಅನಿವಾರ್ಯತೆ ಎಲ್ಲರಿಗೂ ಬಂದಿದೆಯಾ?

ಜಾತ್ಯಾತೀತ ರಾಷ್ಟ್ರವಾದ ಭಾರತ ಮಾತೆ ತನ್ನ ಮಡಿಲಲ್ಲಿ ಅದೆಷ್ಟು ಕೋಟಿಗಟ್ಟಲೆ ಮಕ್ಕಳನ್ನು ನಿತ್ಯ ಹೊರುತ್ತಿದ್ದರೂ, ಆಕೆಗೆ ರೈತ ಮತ್ತು ಸೈನಿಕರಾಗುವ ಮಕ್ಕಳ ಮೇಲೆ ಮಾತ್ರ ನಂಬಿಕೆ. ಉಳಿದವರು ಎಲ್ಲಿ ತಮ್ಮ ಲಾಭಕೋಸ್ಕರ ತನ್ನ ಮಾನವನ್ನು ಮತ್ತು ಪ್ರಾಣವನ್ನು ಕಳೆಯುತ್ತಾರೋ ಎಂಬ ಗಟ್ಟಿ ಅಪನಂಬಿಕೆ ಭಾರತ ಮಾತೆಯಲ್ಲಿದೆ. ಆಕೆಯ ಅಪನಂಬಿಕೆಗೂ ಒಂದು ಅರ್ಥವಿದೆ.

ಸ್ವಾರ್ಥಕ್ಕಾಗಿ ಓಡುತ್ತಿರುವ ಜಗತ್ತಿಗೆ ದೇಶಾಭಿಮಾನ, ಮಾನವೀಯತೆ ಇವೆಲ್ಲ ಮುಖ್ಯವಾದ ವಿಷಯವೇ ಅಲ್ಲ. ಹಣ ಇದ್ದವರು ಈ ಜಗತ್ತಿನಲ್ಲಿ‌ ಬದುಕುತ್ತಿದ್ದಾರೆ, ಗುಣ ಇದ್ದವರು ಬೇಗ ಸಾಯುತ್ತಿದ್ದಾರೆ. ಯಾಕೆಂದರೆ ಈ‌ ಜಗತ್ತಿಗೆ ಹಣವಂತ ಮಾತ್ರ ಬೇಕು. ಆದರೆ ಆ ದೇವರಿಗೆ ತನ್ನ ಹತ್ತಿರ ಗುಣವಂತ ಇದ್ದರೆ ಸಾಕು. ಹಾಗಂತ ಜಗತ್ತು ಪೂರ್ತಿಯಾಗಿ ಕೆಟ್ಟು ಹೋಗಿಲ್ಲ ಎನ್ನುವುದೂ ಸತ್ಯವೇ.

ಈಗಲೂ ಮಾನವೀಯತೆ ಮತ್ತು ದೇಶಭಕ್ತಿ ನಮ್ಮಲ್ಲಿ ಇದೆ. ಆದರೆ ಆ ಮಾನವೀಯತೆ , ದೇಶಭಕ್ತಿ ಅತೀ ಗಂಭೀರ ಪರಿಸ್ಥಿತಿಯಲ್ಲಿ ಮಾತ್ರ ಹೊರಬರುತ್ತಿದೆ. ನಿತ್ಯವೂ ನಮ್ಮ ಕಣ್ಣೆದುರಿಗೆ ಒಂದು ವೃದ್ಧ ದಂಪತಿ ಬೀದಿಯಲ್ಲಿ ನಿಂತು‌ ಭಿಕ್ಷೆ ಬೇಡುತ್ತಿದ್ದರೆ ನಮಗೆ ಅವರ ಮೇಲೆ ಕಿಂಚಿತ್ತೂ‌ ಲಕ್ಷ್ಯವಿಲ್ಲ. ಆದರೆ ಅದೇ ದಂಪತಿ ಒಂದು‌‌ ದಿನ ಬೀದಿಯಲ್ಲೇ ಸತ್ತಾಗ ನಮ್ಮ ಕಣ್ಣಂಚಲ್ಲಿ ನೀರು ಬರುತ್ತದೆ. ಆದರೆ ನಾವು ಅವರನ್ನು ಕಂಡ ದಿನವೇ ಅವರ ಬಗ್ಗೆ ಸ್ವಲ್ಪವಾದರೂ ಕರುಣೆ ತೋರಿಸಿದ್ದರೆ ಅವರ ಸಾವು ಬೀದಿಯಲ್ಲಂತೂ ಆಗುತ್ತಿರಲಿಲ್ಲ ಅಲ್ವಾ?

ಇನ್ನು ಅಪಘಾತವಾದಾಗ ಅವರನ್ನು ಆಸ್ಪತ್ರೆಗೆ ಸೇರಿಸುವುದಕ್ಕಿಂತ ಹೆಚ್ಚು ಮೊಬೈಲ್‌ನಲ್ಲಿ ಫೊಟೋ ತೆಗೆಯುವವರಿಗಂತೂ ಈ ದೇಶದಲ್ಲಿ‌ ಬದುಕುವ ಯಾವ ಹಕ್ಕೂ ಇಲ್ಲ. ಏಕೆಂದರೆ ಇದು ಯಾವ ಬ್ರಿಟಿಷರ ಮೆಂಟಾಲಿಟಿಗೂ ಕಡಿಮೆ ಇಲ್ಲ.

ಜಗತ್ತಿನಲ್ಲಿಯೇ ಅತೀ ಹೆಚ್ಚು ಯುವಕರನ್ನು ಹೊಂದಿರುವ ನಮ್ಮ ದೇಶ ಯುವಕರ ನಿರುತ್ಸಾಹ‌ ಹಾಗೂ ಸ್ವಾರ್ಥತೆಯಿಂದ ಮುನ್ನುಗುತ್ತಿರುವುದು ಅತ್ಯಂತ ಕೆಟ್ಟ ಬೆಳವಣಿಗೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ಹಿರಿಯರು ಹೇಳುತ್ತಿದ್ದುದನ್ನು ಕೇಳಿಕೊಂಡು ಬೆಳೆದು ಯುವಕರಾಗಿರುವ ನಾವು ನಮ್ಮ ಭವಿಷ್ಯಕ್ಕಾಗಿ ಸ್ವಾತಂತ್ರ್ಯ ಪಡೆದುಕೊಳ್ಳದೆ ಇನ್ನೂ ಅವರಿವರ ಆಶಯ ಮತ್ತು ಅವಲಂಬನೆಯನ್ನೇ ನಂಬಿ ಬದುಕುತ್ತಿರುವುದನ್ನು ನೋಡಿದಾಗ ‘ಇಂದಿನ ಯುವಕರೇ ಮುಂದಿನ ಮುದುಕರು’ ಎಂಬ ನಿರುತ್ಸಾಹದ ಸಂದೇಶ ನಮ್ಮ ನಂತರದ ಪೀಳಿಗೆಯವರಿಗೆ ನಾವು ರವಾನಿತ್ತಿರುವುದು ದುರಾದೃಷ್ಟಕರ ಸಂಗತಿ. ಅದರಲ್ಲೂ ನಿಜವಾದ ಸ್ವಾತಂತ್ರ್ಯ ಅಂದರೇನು ಎಂದು ಇನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳದ ನಾವು ನಮಗೆ ಸಿಕ್ಕ‌ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದೇ ಹೆಚ್ಚು.

ಸ್ವಾತಂತ್ರ್ಯಾ ಪೂರ್ವ ಭಾರತದಲ್ಲಿ ನಮ್ಮಲ್ಲಿ ಎಷ್ಟೆಲ್ಲಾ ಕಟ್ಟುಪಾಡುಗಳಿದ್ದವು, ಮಹಿಳೆಯರಿಗೆ, ಮಕ್ಕಳಿಗೆ ಸ್ವಾತಂತ್ರ್ಯ ಅನ್ನುವುದು ಕೇವಲ ಕನಸಿನ ಮಾತಾಗಿತ್ತು. ಆದರೆ ಆಗಿನ ಕಾಲದವರು ಎಂದಿಗೂ ಸಂಸ್ಕಾರ ಹೀನವಾಗಿ ಬದುಕು ನಡೆಸುತ್ತಿರಲಿಲ್ಲ. ಹಾಗೆ ನೋಡಿದರೆ ಈಗಿನ ಕಾಲದವರೇ ಸಂಸ್ಕಾರವನ್ನು ಕಸದ ತೊಟ್ಟಿಗೆ ಎಸೆದು ತಮಗೆ ಸಿಕ್ಕ ಸ್ವಾತಂತ್ರ್ಯದ ಹೆಸರಲ್ಲಿ‌ತಮಗಿಷ್ಟ ಬಂದಂತೆ ಬದುಕುತ್ತಿದ್ದಾರೆ.‌ ಅಂಥವರಿಂದ ಸ್ವಾತಂತ್ರ್ಯ ಎಂಬ ಪದ ಅರ್ಥಹೀನವಾಗಿ ಉಳಿದಿದೆ.

ನಮ್ಮ ದೇಶದಲ್ಲಿ ನಮಗೆ ಏನು ಕಡಿಮೆ ಇದೆ? ಅಸ್ಪೃಶ್ಯತೆ ಇಲ್ಲ, ಮಹಿಳೆ, ಪುರುಷ ಎಂಬ ಬೇಧಭಾವ ಇಲ್ಲ, ಎಲ್ಲರಿಗೂ ಸಮಾನ ಶಿಕ್ಷಣ, ಎಲ್ಲಾ ಜಾತಿ, ಧರ್ಮದವರಿಗೂ ಒಂದೇ ಗೌರವ. ಹೀಗೆ ಒಬ್ಬ ಮನುಷ್ಯನಿಗೆ ನೆಮ್ಮದಿಯಿಂದ ಬಾಳಲು‌ ಏನೆಲ್ಲಾ ಬೇಕು ಅದೆಲ್ಲಾ ನಮ್ಮ ದೇಶದಲ್ಲಿದೆ. ಭಾರತ ಪರಂಪರೆಗೆ ಕೈ ಎತ್ತಿ ಮುಗಿಯುವ ವಿದೇಶಿಗರ ಮುಂದೆ ನಾವು ಸ್ವಾತಂತ್ರ್ಯದ ನೆಪದಲ್ಲಿ ಅದೇ ಪರಂಪರೆಯನ್ನು ಕೈ ಚಲ್ಲಿ ಕೂತಿದ್ದೇವೆ.

ಇಂದು ಮಹಿಳೆಯರ ರಕ್ಷಣೆಗೆ ಹಲವು ಕಾನೂನುಗಳು ಸಂಘಟನೆಗಳು ಇವೆ. ಆದರೆ ಇಂದು ಕೆಲ ಮಹಿಳೆಯರು ತಮಗೆ ಸಿಕ್ಕ ಸ್ವಾತಂತ್ರ್ಯವನ್ನು ಸರಿಯಾಗಿ ಬಳಸಿಕೊಳ್ಳದೆ ಸಣ್ಣಪುಟ್ಟ ಕಾರಣಕ್ಕೂ ಡಿವೋರ್ಸ್ ಪಡೆಯುವುದು, ತಮ್ಮ ಗಂಡನ ಮೇಲೆ ಅಥವಾ ಬೇರೊಬ್ಬ ಪುರುಷನ ಮೇಲೆ ಕೇಸ್ ಹಾಕಿ ಅವರಿಗೆ ಶಿಕ್ಷೆಯಾಗುವಂತೆ ಮಾಡುವುದು ಹೀಗೆ ಹಲವು ರೀತಿಯಲ್ಲಿ ಅವರು ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ಅತ್ಯಾಚಾರದಂತಹ ನಿಜವಾದ ಅನ್ಯಾಯವಾದಾಗ ಮಾತ್ರ ಅವರಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ ಮತ್ತು ಅತ್ಯಾಚಾರಿಗಳಿಗೆ ಭಯ ಹುಟ್ಟಿಸುವಂತಹ ಸ್ವಾತಂತ್ರ್ಯ ಮಹಿಳೆಯರಿಗೆ ಇನ್ನೂ ದೊರೆತಿಲ್ಲ.

ಹಾಗೆಯೇ ಎಲ್ಲೆಲ್ಲೂ ರಾರಾಜಿಸುತ್ತಿರುವ ಭ್ರಷ್ಟಾಚಾರಕ್ಕೆ ಪ್ರೇರಣೆ ನೀಡುತ್ತಿರುವ ಯುವಕರು ಎಲ್ಲಿವರೆಗೂ ಹುಟ್ಟುತ್ತಿರುತ್ತಾರೋ ಅಲ್ಲಿಯವರೆಗೂ ನಿಜವಾದ ಪ್ರತಿಭೆಗೆ ಸ್ವಾತಂತ್ರ್ಯ ಎಲ್ಲಿ ಸಿಗುತ್ತದೆ? ಜಾತ್ಯತೀತ ರಾಷ್ಟ್ರ ಕೇವಲ ಹೆಸರಿಗೆ ಮಾತ್ರನಾ? ಅಥವಾ ಅದು ಸಂವಿಧಾನದ ಪುಸ್ತಕಕ್ಕೆ ಮಾತ್ರ ಸೀಮಿತವಾ? ಜಾತಿ ಆಧಾರದ ಮೇಲೆ ಮತ್ತು ಖುರ್ಚಿ, ಪದವಿ ಆಸೆಯಿಂದ ಆಡಳಿತ ನಡೆಯುತ್ತಿರುವ ರಾಜಕಾರಣಿಗಳಿಂದ ಹಿಡಿದು, ಜಾತಿ ಆಧಾರದ ಮೇಲೆ ಸರಕಾರಿ ಸವಲತ್ತುಗಳನ್ನು ನೀಡುತ್ತಿರುವ ಅಧಿಕಾರಿಗಳನ್ನು ಪ್ರಶ್ನೆ ಮಾಡುವ ಸ್ವಾತಂತ್ರ್ಯ ನಮಗಿನ್ನು ಎಲ್ಲಿ ಬಂದಿದೆ?

ಹಾಗಾದರೆ ಕೇವಲ ಈ ದಿನ ಮಾತ್ರ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಸೀಮಿತವೇ? ಕೊರೊನಾದಂತಹ ಕೆಟ್ಟ ಸಮಸ್ಯೆಯನ್ನು ಎದುರಿಸುತ್ತಿರುವ ನಮ್ಮ ದೇಶದಲ್ಲಿ ಈ ಬಾರಿ ಸ್ವಾತಂತ್ರ್ಯದಿನಾಚರಣೆಯನ್ನೂ ಸಾರ್ವತ್ರಿಕವಾಗಿ ಆಚರಿಸಿಕೊಳ್ಳುವುದು ಅಸಾಧ್ಯ. ಇದು ಈ ಬಾರಿ ಕೇವಲ ಅಧಿಕಾರಿ ವರ್ಗದವರಿಗೆ ಮಾತ್ರ ಸೀಮಿತ. ಹಾಗಾದರೆ ಕೊರೊನಾ ನಿಯಮಾವಳಿಯನ್ನು ಬದಿಗೊತ್ತಿ ಕ್ಷುಲ್ಲಕ ಕಾರಣಕ್ಕೂ ಬಿಡದೆ ದಿನಕೊಂದು ಮನವಿ, ಪ್ರತಿಭಟನೆ ಮಾಡುವ ನಾವು ನಿಜವಾದ ದೇಶಭಕ್ತರಾಗಿದ್ದುಕೊಂಡು ವರ್ಷಕ್ಕೊಮ್ಮೆ ಬರುವ ಸ್ವಾತಂತ್ರ್ಯ ದಿನವಾದ ಈ ಸುದಿನದ ಸವಿನೆನಪಿಗಾಗಿ ಸಾರ್ವತ್ರಿಕವಾಗಿ ಬೇಡ, ನಮ್ಮ ಊರಿನಲ್ಲೇ ಸಾರ್ವತ್ರಿಕವಾಗಿ ಕೊರೊನಾ ನಿಯಮಾವಳಿಯನ್ನೇ ಪಾಲಿಸಿಕೊಂಡು ಆಚರಿಸಲು ಅವಕಾಶ ನೀಡಿ ಎಂದು ಮನವಿ, ಪ್ರತಿಭಟನೆ ಮಾಡಿದ್ದೇವಾ? ಬೇರೆ ಯಾವುದೋ ಹಬ್ಬ ಹರಿದಿನಗಳ ಆಚರಣೆಗೆ ಕಚೇರಿಗಳ ಮುಂದೆ ಫರ್ಮಿಷನ್ ತೆಗೆದುಕೊಳ್ಳುವ ನಮಗೆ ಸ್ವಾತಂತ್ರ್ಯ ಒಂದು ದೊಡ್ಡ ಹಬ್ಬ, ಅದನ್ನು ಚಿಕ್ಕದಾಗಿಯಾದರೂ ಆಚರಿಸಬೇಕು, ಎಂದು ಅನಿಸದಿರುವುದು ವಿಪರ್ಯಾಸ ಅಲ್ವೇ?

ಉಳಿದೆಲ್ಲಾ ದಿನ ಒಂದೇ ಕಡೆ ಸೇರಿಕೊಂಡು ವ್ಯವಹಾರ ಮಾಡಿದರೆ ಕೊರೊನಾ ಬರಲ್ಲ, ಅದೇ ಸ್ವಾತಂತ್ರ್ಯ ದಿನಾಚರಣೆ ಮಾಡಿದರೆ ಕೊರೊನಾ ಬಂದುಬಿಡುತ್ತಾ? ಇದನ್ನೆಲ್ಲಾ ಪ್ರಶ್ನಿಸಲು ನಮಗೆ ಸಿಕ್ಕಿದೆಯಾ ಸ್ವಾತಂತ್ರ್ಯಾ?

ಅದೇನೇ ಇರಲಿ, ಕೊರೊನಾ ಸಂಕಷ್ಟದ ಈ‌ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಬೇಕಿತ್ತು ಅಂದುಕೊಳ್ಳುವುದು ಮೂರ್ಖತನ, ಆದರೆ ತ್ಯಾಗ, ಬಲಿದಾನದಿಂದ ಸಿಕ್ಕ ಈ ಸ್ವಾತಂತ್ರ್ಯವನ್ನು ಸಿಂಪಲ್ಲಾಗಾದರೂ ಆಚರಿಸಿಕೊಂಡು ಸಂಭ್ರಮಿಸುತ್ತೇನೆ ಅಂದುಕೊಳ್ಳುವುದು ನಮ್ಮತನ. ಅದೇ ಈ ದೇಶದ ಸಂವಿಧಾನ ನಮಗೆ ನೀಡಿರುವ ನಿಜವಾದ ಸ್ವಾತಂತ್ರ್ಯ.

ಕೇವಲ ಆಚರಣೆಗಷ್ಟೇ ಸೀಮಿತವಾಗದೆ ಇನ್ನು ಮುಂದೆಯಾದರೂ ನಮ್ಮ ಬದುಕಿಗೆ ನಾವು ಅಳವಡಿಸಿಕೊಂಡಾಗ ಈ ದಿನಕ್ಕೊಂದು ಅರ್ಥ ಸಿಕ್ಕೀತು. ಅಲ್ವೇ…

Leave a Comment

Your email address will not be published. Required fields are marked *