ಕಡಬ : ಹಿಂದೂ ರುದ್ರಭೂಮಿಯಲ್ಲಿ ಅರೆಬೆಂದ ಸ್ಥಿತಿಯಲ್ಲಿ ಮೃತದೇಹವನ್ನು ಸಂಬಂಧಿಕರು ಬಿಟ್ಟು ಹೋದ ಪರಿಣಾಮ ನಾಯಿಗಳು ದೇಹದ ಮಾಂಸವನ್ನು ಎಳೆದು ತಿಂದ ಘಟನೆ ಕಡಬದಲ್ಲಿ ನಡೆದಿದೆ.
ಕಡಬ ಸಮೀಪದ ಗೋಳಿಯಡ್ಕ ವ್ಯಕ್ತಿ ಶನಿವಾರದಂದು ಮೃತಪಟ್ಟಿದ್ದು, ಕಡಬದ ಹಿಂದೂ ರುದ್ರಭೂಮಿಯಲ್ಲಿ ದಹನ ಕಾರ್ಯ ಮಾಡಲಾಗಿತ್ತು. ಮೃತ ವ್ಯಕ್ತಿಯ ಕುಟುಂಬ ಸದಸ್ಯರು ಮೃತದೇಹಕ್ಕೆ ಬೆಂಕಿ ಹಚ್ಚಿ ತೆರಳಿದ್ದರು. ಸ್ವಲ್ಪ ಹೊತ್ತಾದ ಮೇಲೆ ಮಾಂಸ ಬೆಂದ ವಾಸನೆಗೆ ಬಂದ ನಾಯಿಗಳು ಮಾಂಸವನ್ನು ತಿಂದಿವೆ. ಜೊತೆಗೆ ಉಳಿದ ಎಲುಬುಗಳನ್ನು ಕೆಲವು ಮನೆಗಳ ಅಂಗಳದಲ್ಲಿ ತಿಂದು ಬಿಸಾಡಿವೆ.
ಇದೇ ವೇಳೆ ಸ್ಥಳೀಯರಿಗೆ ವಾಸನೆ ಬರಲಾರಂಭಿಸಿದ್ದು, ಸ್ಮಶಾನಕ್ಕೆ ತೆರಳಿದಾಗ ಅರೆಬೆಂದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಸ್ಥಳೀಯರು ಸೇರಿ ಬೆಂಕಿಹಾಕಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.






