ಚಿತ್ರದುರ್ಗ: ಆಕಸ್ಮಿಕವಾಗಿ ವಿಷಯುಕ್ತ ಆಹಾರ ಸೇವಿಸಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ, ಇಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಇಸಾಮುದ್ರ ಗ್ರಾಮದಲ್ಲಿ ನಡೆದಿದೆ.
ಭಾನುವಾರ ರಾತ್ರಿ ಕುಟುಂಸ್ಥರು ಮನೆಯಲ್ಲಿ ರಾಗಿಮುದ್ದೆ ಮತ್ತು ಕಾಳು ಸಾರು ಸೇವಿಸಿದ್ದರು. ಕೆಲ ಸಮಯದ ಬಳಿಕ ಮನೆಯವರಿಗೆಲ್ಲರಿಗೂ ಅನಾರೋಗ್ಯ ಕಾಣಿಸಿಕೊಂಡಿದೆ. ಅಶ್ವಸ್ಥಗೊಂಡವರನ್ನು ನೆರೆಮನೆಯವರು ಆಸ್ಪತ್ರೆಗೆ ದಾಖಸಿದ್ದಾರೆ. ಆದರೆ ಅದಾಗಲೇ ಮನೆ ಯಜಮಾನ ತಿಪ್ಪಾನಾಯ್ಕ್(46), ಪತ್ನಿ ಸುಧಾಬಾಯಿ(43), ವೃದ್ಧೆ ಗುಂಡಿಬಾಯಿ(75) ಮೃತಪಟ್ಟಿದ್ದಾರೆ. ತೀವ್ರ ಅಸ್ವಸ್ಥಗೊಂಡ ಮಕ್ಕಳಾದ ರಾಹುಲ್ (18) ಮತ್ತು ರಮ್ಯ(16) ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಅವರ ಸ್ಥಿತಿ ಚಿಂತಾಜನಕವಾಗಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















