ಮಡಿಕೇರಿ: ತಾಲೂಕಿನ ಕಗ್ಗೋಡ್ಲುವಿನಲ್ಲಿ ಹಸುವೊಂದನ್ನು ಕಟುಕರು ಗುಂಡಿಕ್ಕಿ ಕೊಂದು ಮಾಂಸ ಮಾಡಿದ ಘಟನೆ ನಡೆದಿದೆ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಗುಂಡಿಕ್ಕಿ ಗೋಹತ್ಯೆ ಮಾಡಿದ ವಿಷಯ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ಸಂದರ್ಭ ದುಷ್ಕರ್ಮಿಯೊಬ್ಬ ಹಿಂದು ಸಂಘಟನೆ ಕಾರ್ಯಕರ್ತನೊಬ್ಬನಿಗೆ ಕೋವಿ ತೋರಿಸಿ ಬೆದರಿಸಿದ್ದಾನೆ. ನಂತರ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಜಮಾಯಿಸುವುದನ್ನು ಕಂಡು ಎಲ್ಲರೂ ಕಾಡಿನೊಳಗೆ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಸ್ಥಳದಿಂದ ನೂರಾರು ಕೆಜಿ ಗೋಮಾಂಸ ಸಹಿತ ಕತ್ತಿ ಚೂರಿ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಲ್ಲಿಗೆ ಸಮೀಪದ ಪ್ರದೇಶವೊಂದರಲ್ಲಿ ರೈತರ ಹಸುವೊಂದಕ್ಕೆ ಕಳೆದವಾರ ದುಷ್ಕರ್ಮಿಗಳು ಗುಂಡಿಕ್ಕಿ ಹೊತ್ತ್ತೊಯ್ದಿದ್ದರು. ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಲಾಗಿತ್ತು. ಆದರೆ ಆರೋಪಿಗಳು ಪತ್ತೆಯಾಗಿರಲಿಲ್ಲ. ಪೊಲೀಸರು ಪ್ರಕರಣ ಬೇಧಿಸುವಲ್ಲಿ ವಿಫಲವಾಗಿರುವುದರಿಂದ ಘಟನೆಗಳು ಮರುಕಳಿಸುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


















