ಸಮಗ್ರ ನ್ಯೂಸ್: ತುಳು ಚಿತ್ರರಂಗ ಹಾಗೂ ನಾಟಕ ರಂಗದ ಧ್ರುವತಾರೆ, ಜನಪ್ರಿಯ ಹಾಸ್ಯ ನಟ ಅರವಿಂದ್ ಬೋಳಾರ್ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆ ಈಗ ಕರಾವಳಿ ಭಾಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಮಾತಿನ ವೀಡಿಯೋ ತುಣುಕು ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಎರಡು ಬಣಗಳಾಗಿ ವಿಂಗಡಣೆಯಾಗಿದ್ದು, ಪರ ಮತ್ತು ವಿರೋಧದ ಅಲೆ ಎದ್ದಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅರವಿಂದ್ ಬೋಳಾರ್ ಅವರು, ತಮ್ಮ ವೃತ್ತಿಜೀವನದಲ್ಲಿ ಮುಸ್ಲಿಂ ಸಮುದಾಯದ ಪಾತ್ರಗಳನ್ನು ನಿರ್ವಹಿಸಿದ ಬಗ್ಗೆ ಮೆಲುಕು ಹಾಕಿದ್ದರು. ಈ ಸಂದರ್ಭದಲ್ಲಿ ಅವರು, ನನಗೆ ಮುಸ್ಲಿಮರೇ ಮೊದಲು. ನನ್ನನ್ನು ಅತೀ ಹೆಚ್ಚು ಇಷ್ಟಪಟ್ಟಿದ್ದೇ ಮುಸ್ಲಿಂ ಸಮುದಾಯದವರು. ಯಾವುದೇ ವೇದಿಕೆಯಲ್ಲೂ ನಾನು ಇದನ್ನೇ ಹೇಳುತ್ತೇನೆ ಎಂದು ಹೇಳಿಕೆ ನೀಡಿದ್ದರು. ಈ ಮಾತುಗಳೇ ಈಗ ವಿವಾದದ ಕಿಚ್ಚು ಹಚ್ಚಲು ಕಾರಣವಾಗಿದೆ.
ಅರವಿಂದ್ ಬೋಳಾರ್ ಅವರ ಈ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಒಬ್ಬ ಕಲಾವಿದನಿಗೆ ಯಾವುದೇ ಧರ್ಮ ಅಥವಾ ಜಾತಿಯ ಹಂಗಿರುವುದಿಲ್ಲ. ಸಾರ್ವಜನಿಕವಾಗಿ ಬೆಳೆದು ನಿಂತ ಮೇಲೆ ಒಂದು ನಿರ್ದಿಷ್ಟ ಸಮುದಾಯವನ್ನು ಮಾತ್ರ ಉಲ್ಲೇಖಿಸಿ ಅವರೇ ಮೊದಲು ಎಂದು ಹೇಳುವುದು ಒಬ್ಬ ಕಲಾವಿದನಿಗೆ ಶೋಭೆ ತರುವುದಿಲ್ಲ ಎಂದು ಹಲವರು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೆ, ವೈರಲ್ ವೀಡಿಯೋ ನೋಡಿದ ಕೆಲವು ಅಭಿಮಾನಿಗಳು ನೇರವಾಗಿ ಅರವಿಂದ್ ಬೋಳಾರ್ ಅವರಿಗೆ ಕರೆ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ವಿವಾದ ಒಂದು ಕಡೆಯಾದರೆ, ಮತ್ತೊಂದೆಡೆ ಅರವಿಂದ್ ಬೋಳಾರ್ ಅವರ ಪರವಾಗಿಯೂ ಅನೇಕರು ಧ್ವನಿ ಎತ್ತಿದ್ದಾರೆ. ಬೋಳಾರ್ ಅವರು ಕರಾವಳಿಯ ಸೌಹಾರ್ದತೆಯ ಸಂಕೇತವಾಗಿ ಈ ಮಾತುಗಳನ್ನು ಆಡಿದ್ದಾರೆ. ತಮಗೆ ಸಿಕ್ಕ ಪ್ರೀತಿಯನ್ನು ಸ್ಮರಿಸುವುದು ತಪ್ಪಲ್ಲ. ಅವರು ಯಾವುದೇ ಧರ್ಮವನ್ನು ಕೀಳಾಗಿ ಕಂಡಿಲ್ಲ ಅಥವಾ ಇತರ ಧರ್ಮದ ಅಭಿಮಾನಿಗಳಿಗೆ ಅವಮಾನ ಮಾಡಿಲ್ಲ. ಅವರ ಮಾತನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಬೆಂಬಲಿಗರು ವಾದಿಸುತ್ತಿದ್ದಾರೆ.









