ಸಮಗ್ರ ನ್ಯೂಸ್: ಕರಾವಳಿಯಲ್ಲಿ ಆಟಿ ಅಮಾವಾಸ್ಯೆ ಸಂಭ್ರಮ ಜೋರಾಗಿದ್ದು ದ.ಕ ಜಿಲ್ಲೆಯ ಬಂಟ್ವಾಳದ ಕಾರಿಂಜೇಶ್ವರ ದೇವಸ್ಥಾನ ಮತ್ತು ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ಆ.12ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಆಟಿ ಅಮಾವಾಸ್ಯೆ ಪ್ರಯುಕ್ತ ತೀರ್ಥ ಸ್ನಾನ ನಡೆಯಲಿದೆ.
ಕಾರಿಂಜ ಕ್ಷೇತ್ರದಲ್ಲಿ ಗದಾತೀರ್ಥ ಕೆರೆ ಸಹಿತ ಜಾನು ತೀರ್ಥ ಮತ್ತು ಉಂಗುಷ್ಠ ತೀರ್ಥ ಕುಂಡದಲ್ಲಿ ತೀರ್ಥ ಸ್ನಾನ ಹಾಗೂ ಪಾರ್ವತಿ ಪರಮೇಶ್ವರ ದೇವರಿಗೆ ವಿಶೇಷ ಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೀರೇಂದ್ರ ಅಮೀನ್ ತಿಳಿಸಿದ್ದಾರೆ.
ನರಹರಿ ಪರ್ವತ ಬಂಡೆ ನಡುವೆ ಶಂಖ, ಚಕ್ರ, ಗದಾ, ಪದ್ಮ, ತೀರ್ಥ ಕುಂಡದಲ್ಲಿ ಭಕ್ತರಿಗೆ ತೀರ್ಥ ಸ್ನಾನ ಮಾಡಲು ಅವಕಾಶ ಇದೆ. ದೇವಳದಲ್ಲಿ ಮಹಾಗಣಪತಿ ಮತ್ತು ಸದಾಶಿವ ದೇವರಿಗೆ ವಿಶೇಷ ಪೂಜೆ ಮತ್ತು ಭಕ್ತರಿಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಆಷಾಢ ಮಾಸದ ಅಮಾವಾಸ್ಯೆಯನ್ನೇ ತುಳುನಾಡಿನಲ್ಲಿ ‘ಆಟಿ ಅಮಾವಾಸ್ಯೆ’ ಎಂದು ಕರೆಯಲಾಗುತ್ತದೆ. ಇದೇ ಅಮಾವಾಸ್ಯೆಯನ್ನು ಕರ್ನಾಟಕದ ಕೆಲ ಭಾಗಗಳಲ್ಲಿ ‘ಭೀಮನ ಅಮಾವಾಸ್ಯೆ’ ಅಥವಾ ‘ಆಷಾಢ ಅಮಾವಾಸ್ಯೆ’ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ತುಳುನಾಡಿನ ಜನಜೀವನದಲ್ಲಿ ಆಟಿ ತಿಂಗಳಿಗೆ ಅತ್ಯಂತ ವಿಶೇಷ ಸ್ಥಾನವಿದ್ದು, ಈ ಅವಧಿಯಲ್ಲಿ ಪ್ರಕೃತಿ, ಆರೋಗ್ಯ ಮತ್ತು ಸಾಂಪ್ರದಾಯಿಕ ಜೀವನಶೈಲಿಗೆ ಸಂಬಂಧಿಸಿದ ಹಲವು ಆಚರಣೆಗಳು ಕಂಡುಬರುತ್ತವೆ. ಅವುಗಳಲ್ಲಿ ಆಟಿ ಅಮಾವಾಸ್ಯೆಯ ಆಚರಣೆಯು ಕರಾವಳಿಗರ ಜೀವನದ ಅತ್ಯಂತ ಪ್ರಮುಖ ಭಾಗವಾಗಿದೆ.








