ಸಮಗ್ರ ನ್ಯೂಸ್: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಂಜೇಶ್ವರ ಉಪಜಿಲ್ಲೆಯ ಎಲ್ಪಿ ವಿದ್ಯಾರ್ಥಿಗಳಿಗಾಗಿ ಸಮಾಜ ವಿಜ್ಞಾನ ಕ್ಲಬ್ ಆಯೋಜಿಸಿದ್ದ ‘ಸ್ವಾತಂತ್ರ್ಯ ರಸಪ್ರಶ್ನೆ 2026’ ಸ್ಪರ್ಧೆಯಲ್ಲಿ ‘ಸಾವರ್ಕರ್’ ಹೆಸರು ಬಂದಿರುವುದು ಕೇರಳದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ.
ಫ್ರೀಡಂ ಕ್ವಿಜ್ನಲ್ಲಿ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿದ 15 ಪ್ರಶ್ನೆಗಳ ಜತೆಗೆ ನೀಡಿದ 5 ಟೈ ಬ್ರೇಕರ್ ಪ್ರಶ್ನೆಗಳಲ್ಲಿ ಕೊನೆಯದ್ದು ಸಾರ್ವರ್ಕರ್ ಕುರಿತದ್ದಾಗಿತ್ತು. ಬ್ರಿಟೀಷರ ಕೈಯಿಂದ ಅತ್ಯಂತ ಹೆಚ್ಚು ಶಿಕ್ಷೆ ಅನುಭವಿಸಿದ ಸ್ವಾಂತ್ರ್ಯಹೋರಾಟಗಾರ ಯಾರು? ಎಂದು ಪ್ರಶ್ನೆ ಕೇಳಲಾಗಿತ್ತು. ಅದರ ಉತ್ತರ ಕೀಲಿಯಲ್ಲಿ ವಿ.ಡಿ.ಸಾವರ್ಕರ್ ಎಂದು ನಮೂದಿಸಲಾಗಿದ್ದು,
ಸಾವರ್ಕರ್ ಪ್ರಶ್ನೆ ಸಿದ್ಧಪಡಿಸಿದ ಅಧ್ಯಾಪಕರೊಬ್ಬರ ವಿರುದ್ಧ ಸರ್ಕಾರ ಅಮಾನತು ಕ್ರಮ ಕೈಗೊಂಡಿದೆ.
ಸಾರ್ವರ್ಕರ್ ಕುರಿತಾದ ಪ್ರಶ್ನೆಗೆ ಕೇರಳದ ಆಡಳಿತ ಯುಡಿಎಫ್ ಒಕ್ಕೂಟ ಹಾಗೂ ಪ್ರತಿಪಕ್ಷ ಎಲ್ಡಿಎಫ್ ಒಕ್ಕೂಟ ವ್ಯಾಪಕ ವಿರೋಧ ವ್ಯಕ್ತಪಡಿಸಿ ಅಧ್ಯಾಪಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿತ್ತು. ಪ್ರತಿಭಟನೆಗೆ ಮಣಿದ ಕೇರಳ ಶಿಕ್ಷಣ ಇಲಾಖೆ ಕುಂಬಳೆಯ ಎಯುಪಿಎಸ್ ಶಾಲೆಯ ಶಿಕ್ಷಕ ಗುರುಪ್ರಸಾದ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಇಡೀ ದೇಶವೇ ವೀರ ಸಾವರ್ಕರ್ ಸ್ವಾತಂತ್ರ್ಯ ಸೇನಾನಿ ಎಂಬ ಇತಿಹಾಸ ಹೇಳುತ್ತಿದ್ದರೆ, ಕೇರಳದ ಯುಡಿಎಫ್ ಹಾಗೂ ಎಲ್ಡಿಎಫ್ ಪಕ್ಷಗಳು ಇದನ್ನು ಒಪ್ಪಿಕೊಳ್ಳಲು ಸಿದ್ಧವಾಗದೇ ಪ್ರಶ್ನೆ ಕೇಳಿದ ಅಧ್ಯಾಪಕನನ್ನೇ ಅಮಾನತುಗೊಳಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರನಿಗೆ ಅವಮಾನ ಮಾಡಿದೆ ಎಂದು ಕಾಸರಗೋಡು ಜಿಲ್ಲಾ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.








