ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಸಂಪಾಜೆ ಸಮೀಪದ ಕಡೆಪಾಲದಲ್ಲಿ ನಡೆದ 22 ವರ್ಷದ ಯುವತಿಯ ಅನುಮಾನಾಸ್ಪದ ಸಾವು ಇದೀಗ ಭಾರಿ ಕುತೂಹಲ ಹಾಗೂ ಅನುಮಾನಗಳಿಗೆ ಕಾರಣವಾಗಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿಗೆ ಕಳಿಸಿದ್ದಾರೆ.
ಕಡೆಪಾಲ ಅಲಿಗುಡ್ಡೆಯ ನಿವಾಸಿ ಅಲವಿಕುಟ್ಟಿ ಎಂಬವರ ಪುತ್ರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಅನ್ಸಾರ್ ಎಂಬವರ ಪತ್ನಿ ಫಾತಿಮತ್ ನಿಶಾನ(22) ಮೃತಪಟ್ಟ ಮಹಿಳೆ. ಮೃತದೇಹವನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತರಲಾಗಿತ್ತು, ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಜುಲೈ 18ರ ರಾತ್ರಿ ಫಾತಿಮತ್ ನಿಶಾನ (22) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ನಿಶಾನ ಅವರಿಗೆ ನಾಲ್ಕು ವರ್ಷಗಳ ಹಿಂದೆ ಅನ್ಸಾರ್ ಜೊತೆ ವಿವಾಹವಾಗಿತ್ತು. ಈ ದಂಪತಿಗೆ ಎರಡೂವರೆ ವರ್ಷದ ಪುತ್ರನಿದ್ದಾನೆ. ಫಾತಿಮತ್ ನಿಶಾನ ಗಂಡನ ಕುಟುಂಬವು ಮೊದಲು ದೇವರಕೊಲ್ಲಿಯಲ್ಲಿ ವಾಸಿಸುತ್ತಿದ್ದು ಇದೀಗ ಕೆಲವು ವರ್ಷಗಳಿಂದ ಸಂಪಾಜೆಯಲ್ಲಿ ನೆಲೆಸಿದ್ದರು.
ಘಟನೆಯ ದಿನ ರಾತ್ರಿ ಫಾತಿಮತ್ ನಿಶಾನ ತಮ್ಮ ತಾಯಿಗೆ ಕರೆ ಮಾಡಿ, ‘ಗಂಡನ ಮನೆಯಲ್ಲಿ ನನಗೆ ತೀವ್ರ ಕಿರುಕುಳ ನೀಡುತ್ತಿದ್ದಾರೆ’ ಎಂದು ತಿಳಿಸಿದ್ದರು. ಮಗಳ ಕರೆ ಬಂದ ತಕ್ಷಣ ತಾಯಿ ಜುಬೈದಾ ಕುಂಬ್ರದಿಂದ ಆಟೋದಲ್ಲಿ ಮಗಳ ಮನೆಗೆ ಧಾವಿಸಿದ್ದಾರೆ. ಆದರೆ, ತಾಯಿ ಮನೆ ತಲುಪುವಷ್ಟರಲ್ಲಿ ನಿಶಾನ ಮೃತಪಟ್ಟ ಸ್ಥಿತಿಯಲ್ಲಿದ್ದರು. ಸ್ನಾನಗೃಹದ ಶವರ್ಗೆ ನೇಣು ಬಿಗಿದುಕೊಂಡು ನಿಶಾನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗಂಡನ ಮನೆಯವರು ಹೇಳುತ್ತಿದ್ದಾರೆ. ಆದರೆ ಈ ವಾದವನ್ನು ನಿಶಾನ ಕುಟುಂಬಸ್ಥರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
‘ಇದು ಆತ್ಮಹತ್ಯೆಯಲ್ಲ, ಇದೊಂದು ವ್ಯವಸ್ಥಿತ ಕೊಲೆ’ ಎಂದು ಆರೋಪಿಸಿರುವ ಮೃತರ ತಾಯಿ ಹಾಗೂ ಸಹೋದರರು ಪೊಲೀಸ್ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಈ ಸಾವಿನ ನಿಜವಾದ ಕಾರಣ ಏನೆಂಬುದು ಹೊರಬರಬೇಕಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.







