ಕರಾವಳಿ ಪ್ರದೇಶದಲ್ಲಿ ಬಿಸಿಲು ಮಳೆ‌ ಜೊತೆಯಾಟ| ಜೂನ್ ಅಂತ್ಯಕ್ಕೆ ಮಳೆ‌ ಹೆಚ್ಚಾಗುವ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಹವಾಮಾನದ ವೈವಿಧ್ಯಮಯ ಆಟ ಮುಂದುವರಿದಿದ್ದು, ಶುಕ್ರವಾರದಂದು ದಿನವಿಡೀ ಮೋಡ ಕವಿದ ಹಾಗೂ ಬಿಸಿಲಿನ ಮಿಶ್ರ ವಾತಾವರಣ ಕಂಡುಬಂದಿದೆ. ಬೆಳಗ್ಗಿನ ಜಾವ ಸುರಿದ ದಿಢೀರ್ ಮಳೆ ಸಾರ್ವಜನಿಕರಲ್ಲಿ ಮುಂಗಾರಿನ ಚುರುಕಿನ ಮುನ್ಸೂಚನೆ ನೀಡಿದರೂ, ಮಧ್ಯಾಹ್ನದ ವೇಳೆಗೆ ಬಿಸಿಲಿನ ಬೇಗೆ ಹೆಚ್ಚಾಗಿತ್ತು.

Ad Widget ... .. Ad Widget .

ಶುಕ್ರವಾರ ಬೆಳಗ್ಗೆ ಕರಾವಳಿಯ ಪ್ರಮುಖ ಗ್ರಾಮೀಣ ಹಾಗೂ ಘಟ್ಟ ಪ್ರದೇಶಗಳಾದ ಬೆಳ್ತಂಗಡಿ, ಸುಳ್ಯ, ಧರ್ಮಸ್ಥಳ ಮತ್ತು ಚಾರ್ಮಾಡಿ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳಿಗೆ ಕೊಂಚ ವೇಗ ಸಿಕ್ಕಂತಾಗಿದೆ. ಕರಾವಳಿ ತೀರ ಪ್ರದೇಶಗಳಲ್ಲಿ ಸದ್ಯ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕರಾವಳಿಯುದ್ದಕ್ಕೂ ಸರಾಸರಿ 14.8 ಮಿ.ಮೀ ಮಳೆ ದಾಖಲಾಗಿದೆ.

Ad Widget

ಪ್ರಸ್ತುತ ಮುನ್ಸೂಚನೆಗಳ ಪ್ರಕಾರ, ಕರಾವಳಿ ತೀರದ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜೂನ್ 27 ಮತ್ತು 28ರ ತನಕ ಇದೇ ರೀತಿಯ ಮಿಶ್ರ ವಾತಾವರಣ ಮುಂದುವರಿಯಲಿದೆ. ಗ್ರಾಮೀಣ ಭಾಗಗಳಲ್ಲಿ ಬಿಸಿಲು-ಮೋಡದ ಕಣ್ಣಾಮುಚ್ಚಾಲೆ ಇರಲಿದ್ದು, ದಿನದಲ್ಲಿ ಒಂದೆರಡು ಬಾರಿ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ. ಆದರೆ, ಜೂನ್ 28ರಿಂದ ಮಳೆಯ ಪ್ರಮಾಣ ತೀವ್ರಗೊಳ್ಳಲಿದ್ದು, ಮಳೆಯ ಬಿಡುವಿನ ಅಂತರ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಅರಬ್ಬಿ ಸಮುದ್ರದ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಗಂಟೆಗೆ 45 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ದಟ್ಟವಾಗಿದೆ. ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಲಿರುವುದರಿಂದ ಕಡಲ ತೀರದ ನಿವಾಸಿಗಳು, ಪ್ರವಾಸಿಗರು ಹಾಗೂ ಮೀನುಗಾರರು ಕಡ್ಡಾಯವಾಗಿ ಜಾಗರೂಕರಾಗಿರಬೇಕು ಎಂದು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸದ್ಯಕ್ಕೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಮುನ್ನೆಚ್ಚರಿಕೆ ರವಾನಿಸಲಾಗಿದೆ. ಮುಂದಿನ 2-3 ದಿನಗಳ ಕಾಲ ಸಾಧಾರಣ ಮಳೆಯಿದ್ದರೂ, ಜೂನ್ ಅಂತ್ಯದ ವೇಳೆಗೆ ಮುಂಗಾರು ಮತ್ತಷ್ಟು ಬಿರುಸುಕೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

Leave a Comment

Your email address will not be published. Required fields are marked *