ಸಮಗ್ರ ನ್ಯೂಸ್: ದೇಶದಲ್ಲಿ ಮುಂಗಾರು ಮಳೆ ಕೊರತೆ ಮತ್ತು ಕೆಲವು ರಾಜ್ಯಗಳಲ್ಲಿ ಅತಿವೃಷ್ಟಿಯ ಅನಿಶ್ಚಿತತೆ ಒಟ್ಟಿಗೇ ಎದುರಾಗಿದೆ. ಎಲ್ ನಿನೋ ಪ್ರಭಾವದಿಂದಾಗಿ ದೇಶದಲ್ಲಿ ಸದ್ಯ ಶೇಕಡಾ 43 ರಷ್ಟು ಮುಂಗಾರು ಮಳೆ ಕೊರತೆ ಉಂಟಾಗಿದ್ದು, ಇದರಿಂದಾಗಿ ಬಿತ್ತನೆ ಕಾರ್ಯಕ್ಕೆ ಭಾರಿ ಹಿನ್ನಡೆಯಾಗಿದೆ. ದೇಶದ ಒಟ್ಟು 111 ಜಿಲ್ಲೆಗಳು ತೀವ್ರ ಬೆಳೆ ಹಾನಿಯ ಅಪಾಯವನ್ನು ಎದುರಿಸುತ್ತಿವೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಂಗಳವಾರ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ವರ್ಷ ದೇಶದಲ್ಲಿ ಎಲ್-ನಿನೋ ಎಫೆಕ್ಟ್ ಭೀತಿ ತೀವ್ರಗೊಂಡಿದ್ದು, ಮುಂಗಾರು ಮಳೆ ಸಾಮಾನ್ಯಕ್ಕಿಂತ ಭಾರಿ ಪ್ರಮಾಣದಲ್ಲಿ ಕುಸಿಯುವ ಆತಂಕ ಎದುರಾಗಿದೆ. ಕರ್ನಾಟಕ ಸೇರಿದಂತೆ ದೇಶದ ಒಟ್ಟು 111 ಜಿಲ್ಲೆಗಳಲ್ಲಿ ಈ ಬಾರಿ ಮಳೆಯ ಕೊರತೆಯಿಂದಾಗಿ ತೀವ್ರ ಸಂಕಷ್ಟದ ಪರಿಸ್ಥಿತಿ ತಲೆದೋರಬಹುದು ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಕಳವಳ ವ್ಯಕ್ತಪಡಿಸಿದ್ದಾರೆ.
ಜುಲೈ 2 ರವರೆಗೆ ಇದೇ ರೀತಿಯ ದುರ್ಬಲ ಮುಂಗಾರು ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ. ಇದು ಖಾರಿಫ್ (ಮುಂಗಾರು) ಹಂಗಾಮಿನ ಬಿತ್ತನೆಗೆ ರೈತರಿಗೆ ಇರುವ ಸಮಯವನ್ನು ಮತ್ತಷ್ಟು ಕಸಿದುಕೊಳ್ಳಲಿದೆ. ಜೂನ್ 22 ರವರೆಗಿನ ಅಂಕಿ-ಅಂಶಗಳ ಪ್ರಕಾರ, ಒಟ್ಟು ಬಿತ್ತನೆ ಪ್ರದೇಶದ ಶೇಕಡಾ 10 ಕ್ಕಿಂತ ಕಡಿಮೆ ಭಾಗದಲ್ಲಿ ಮಾತ್ರ ಬಿತ್ತನೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ (11.79 ಮಿಲಿಯನ್ ಹೆಕ್ಟೇರ್) ಈ ಬಾರಿ ಬಿತ್ತನೆ ವಿಸ್ತೀರ್ಣ (11.99 ಮಿಲಿಯನ್ ಹೆಕ್ಟೇರ್) ಅತ್ಯಲ್ಪ ಏರಿಕೆ ಕಂಡಿದೆಯಾದರೂ, ಸೋಯಾಬೀನ್ ಸೇರಿದಂತೆ ಪ್ರಮುಖ ಬೆಳೆಗಳ ಬಿತ್ತನೆ ಹಿಂದುಳಿದಿದೆ.








