ಸಮಗ್ರ ನ್ಯೂಸ್: ಕೇಂದ್ರ ಸಚಿವರಾದ ಹೆಚ್ಡಿ ಕುಮಾರಸ್ವಾಮಿ ಅವರು ಮಣಿಕಂಠನ ದರ್ಶನಕ್ಕಾಗಿ ಶಬರಿಮಲೆಗೆ ಹೊರಟಿದ್ದಾರೆ. ಇಂದು ಬೆಳಗ್ಗೆ ಕುಮಾರಸ್ವಾಮಿಯವರು ಪಡಿಪೂಜೆ, ಪುಷ್ಪಾಭಿಷೇಕ ಪೂಜೆ ಮಾಡಿಸಿದ್ದಾರೆ.
ಪೂಜೆ ಬಳಿಕ ಅಯ್ಯಪ್ಪ ಮಾಲೆ ಹಾಕಿಕೊಂಡು, ಇರಿಮುಡಿ ಹೊತ್ತು ಕುಮಾರಸ್ವಾಮಿ ಶಬರಿಮಲೆ ಯಾತ್ರೆ ಕೈಗೊಳ್ಳಲಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಜೊತೆಯಲ್ಲಿ ಜೆಡಿಎಸ್ ನಾಯಕರು ಸಹ ಮಾಲೆ ಹಾಕಿ ಅಯ್ಯಪ್ಪ ದರ್ಶನಕ್ಕೆ ತೆರಳುತ್ತಿದ್ದಾರೆ. ಸುರೇಶ್ ಬಾಬು, ಬೋಜೇಗೌಡ, ಸಾ ರಾ ಮಹೇಶ್, ಎ ಮಂಜು ಸೇರಿದಂತೆ ಹಲವು ಜೆಡಿಎಸ್ ನಾಯಕರು ಕುಮಾರಸ್ವಾಮಿ ಜೊತೆಯಲ್ಲಿ ಶಬರಿಮಲೆಗೆ ಹೊರಟಿದ್ದಾರೆ.
ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿರುವ ಪ್ರಸಿದ್ಧ ಹಿಂದೂ ಪುಣ್ಯಕ್ಷೇತ್ರವೇ ಶಬರಿಮಲೆ. ಸ್ವಾಮಿ ಅಯ್ಯಪ್ಪನಿಗೆ ಮುಡಿಪಾಗಿರುವ ದೇವಾಲಯವಾಗಿದ್ದು, ಸಮುದ್ರ ಮಟ್ಟದಿಂದ ಸುಮಾರು 3 ಸಾವಿರ ಅಡಿ ಎತ್ತರದಲ್ಲಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
ಕೇರಳದ ಅತ್ಯುತ್ತಮ ತೀರ್ಥಯಾತ್ರಾ ಸ್ಥಳ ಶಬರಿಮಲೆ ಆಗಿದೆ. ಭಾರತದ ದಕ್ಷಿಣ ರಾಜ್ಯಗಳು, ದೇಶದ ಮತ್ತು ವಿದೇಶದಲ್ಲಿ ಇತರ ಭಾಗಗಳಿಂದ ಯಾತ್ರಾರ್ಥಿಗಳನ್ನು ಸೆಳೆಯುತ್ತದೆ. ಶಬರಿಮಲೆಗೆ ತೆರಳುವ ಭಕ್ತರು ಕಠಿಣ ವ್ರತ ಆಚರಣೆ ಮಾಡುತ್ತಾರೆ.








