ಸಮಗ್ರ ನ್ಯೂಸ್: ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಸಿಎಂ ವಿಜಯ್ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ಹಿನ್ನೆಲೆ ಉಡುಪಿ ಜಿಲ್ಲಾ ಪೊಲೀಸರು ಪ್ರಕಟಣೆ ಹೊರಡಿಸಿದ್ದು, ನಾಗರಿಕರು ಮತ್ತು ಭಕ್ತರಿಗೆ ಕೆಲ ಸೂಚನೆಗಳನ್ನು ನೀಡಿದ್ದಾರೆ.
ತಮಿಳುನಾಡು ಸಿಎಂ ಜೋಸೆಫ್ ವಿಜಯ್, ಜೂನ್ 12ರಂದು ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಕೈಗೊಳ್ಳಲಿದ್ದಾರೆ. ವಿಜಯ್ ಭೇಟಿ ಹಿನ್ನೆಲೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿಎಂ ವಿಜಯ್ ಸಂಚರಿಸುವ ಮಾರ್ಗದಲ್ಲಿ, ದೇವಸ್ಥಾನದ ಸುತ್ತಮುತ್ತಲು ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸಿಎಂ ಜೋಸೆಫ್ ವಿಜಯ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಹಿಂದಿರುಗಲಿದ್ದಾರೆ. ಯಾವುದೇ ಸಾರ್ವಜನಿಕ ಭೇಟಿಯ ಕಾರ್ಯಕ್ರಮ ಇರುವುದಿಲ್ಲ ಎಂದು ಪೊಲೀಸರು ತಿಳಿಸಿದರು.
ವಾಹನ ಸಂಚಾರದ ಕಾನ್ವಾಯ್ ಹಾದಿ, ಪ್ರವೇಶ ದ್ವಾರ ಅಥವಾ ದೇವಸ್ಥಾನದ ಆವರಣದಲ್ಲಿ ಗುಂಪು ಸೇರಬಾರದು, ಜನಸಂದಣಿ ಮಾಡಬಾರದು, ವಿಶೇಷ ಬಂದೋಬಸ್ತ್ ಇರುವುದರಿಂದ ಮಧ್ಯಾಹ್ನ 12 ರಿಂದ ಸಂಜೆ 5:00 ವರೆಗೆ ಭಕ್ತಾದಿಗಳು ದರ್ಶನ ತಪ್ಪಿಸುವುದು ಸೂಕ್ತ. ಭಕ್ತಾದಿಗಳಿಗೆ ಯಾವುದೇ ಸಮಯದಲ್ಲಿ ದೇವಸ್ಥಾನ ಪ್ರವೇಶ ನಿಷೇಧವಿಲ್ಲ, ತಮಿಳುನಾಡು ಸಿಎಂ ಭೇಟಿ ಹಿನ್ನೆಲೆಯಲ್ಲಿ ದರ್ಶನದ ವೇಳೆ ಅನಾನುಕೂಲವಾಗಬಹುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಪ್ರಕಟಣೆ ಹೊರಡಿಸಿದ್ದಾರೆ.
ತಮಿಳುನಾಡಿನ ಅಂದಿನ ಸಿಎಂ ಎಂಜಿಆರ್ ಅವರು, ಈ ಹಿಂದೆ ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನ ಪಡೆದಿದ್ದರು. ಭೇಟಿ ನೀಡಿದ್ದ ಸಂದರ್ಭದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಿಗೆ ಚಿನ್ನದ ಖಡ್ಗವನ್ನು ಅರ್ಪಿಸಿದ್ದರು. ನಂತರ ಜಯಲಲಿತಾ ಅವರು ಕೂಡ ಕೊಲ್ಲೂರಿಗೆ ಆಗಮಿಸಿ ತಾಯಿಯ ದರ್ಶನವನ್ನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ನೂತನ ಸಿಎಂ ಆಗಿರುವ ಜೋಸೆಫ್ ವಿಜಯ್ ಅವರು ಭೇಟಿ ನೀಡುತ್ತಿದ್ದು, ಈ ಮೂಲಕ ವಿಜಯ್ ಅವರು ಮೂಕಾಂಬಿಕೆಯ ದರ್ಶನ ಪಡೆದ ಮೂರನೇ ತಮಿಳುನಾಡು ಸಿಎಂ ಆಗಲಿದ್ದಾರೆ.








