ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ಚಾರಣ ಸ್ಥಳ, ಪ್ರಮುಖ ಜಲಪಾತ ಜೂನ್ 1 ರಿಂದ ಪ್ರವಾಸಿಗರ ವೀಕ್ಷಣೆಗೆ ತೆರೆದುಕೊಳ್ಳಲಿದೆ. ಕಳೆದ ಜನವರಿಯಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದಿಂದ ನೇತ್ರಾವತಿ ಪೀಕ್, ಬಂಡಾಜೆ ಜಲಪಾತ, ಗಡಾಯಿಕಲ್ಲು ಮೊದಲಾದ ಸ್ಥಳಗಳಿಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು.
ಬೇಸಿಗೆಯಲ್ಲಿ ಬೆಂಕಿ ಪ್ರಕರಣ, ಕಾಡ್ಗಿಚ್ಚು ಇತ್ಯಾದಿ ಅನಾಹುತಗಳು ನಡೆಯದಂತೆ ಹಾಗೂ ಹುಲಿಗಣತಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ತಾಲೂಕಿನ ಮಲವಂತಿಗೆ ಗ್ರಾಮ ಅತೀ ಹೆಚ್ಚು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಇದು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿದೆ. ಅರಣ್ಯ ಪ್ರದೇಶವಾದ ಇಲ್ಲಿಗೆ ಚಾರಣಿಗರು, ಜಲಪಾತ ವೀಕ್ಷಕರು ಆಗಮಿಸುತ್ತಾರೆ. ಆದರೆ ಬೇಸಿಗೆಯಲ್ಲಿಈ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಪ್ರಕರಣಗಳ ಭಯ ಸಾಕಷ್ಟಿದೆ.
ಇಲ್ಲಿ ಒಂದು ಕಿಡಿ ಬೆಂಕಿ ಬಿದ್ದರೂ ಅದು ತಕ್ಷಣ ಇಡೀ ಪರಿಸರವನ್ನು ವ್ಯಾಪಿಸುತ್ತದೆ. ಪ್ರವಾಸಿಗರಿಗೆ ಎಷ್ಟೇ ಎಚ್ಚರಿಕೆ ನೀಡಿದರೂ ಅದನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದರಿಂದ ಅನಾಹುತಗಳು ಉಂಟಾಗುತ್ತವೆ. ಈ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇಲಾಖೆ ನಿಷೇಧ ಹೇರಿತ್ತು.
ತಾಲೂಕಿನ ಇನ್ನೊಂದು ಪ್ರಮುಖ ಚಾರಣ ಸ್ಥಳವಾದ ನಡ- ಲಾಯಿಲ ಗ್ರಾಮದ ಗಡಾಯಿಕಲ್ಲಿಗೂ ಜೂನ್ 1ರಿಂದ ಪ್ರವೇಶ ಲಭಿಸಲಿದೆ. ಇಲ್ಲಿ ಕಳೆದ ಫೆಬ್ರವರಿಯಲ್ಲಿ ಅಗ್ನಿ ಅವಘಡ ಎಚ್ಚರಿಕೆ ಹಾಗೂ ಹುಲಿಗಣತಿ ಅಂಗವಾಗಿ ಪ್ರವೇಶ ನಿಷೇಧ ಹೇರಲಾಗಿತ್ತು. ಸಮುದ್ರಮಟ್ಟದಿಂದ 1,700 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲು ಚಾರಣಿಗರ ಆಕರ್ಷಣೀಯ ಕೇಂದ್ರವಾಗಿದೆ. ಹೆಚ್ಚಿನ ಮಳೆ ಉಂಟಾದರೆ ಕಲ್ಲುಗಳು ಜಾರುವ ಕಾರಣ ಇಲ್ಲಿ ಮಳೆಗಾಲದ ಯಾವುದೇ ಸಮಯ ಪ್ರವೇಶಕ್ಕೆ ನಿಷೇಧ ಹೇರುವ ಸಾಧ್ಯತೆ ಇದೆ.






