ಸಮಗ್ರ ನ್ಯೂಸ್: ದಕ್ಷಿಣ ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ಊಟದ ನಂತರ ಕಲ್ಲಂಗಡಿ ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 25ರಂದು ಜೆಜೆ ಮಾರ್ಗ್ ನಿವಾಸದಲ್ಲಿ ನಡೆದ ಕುಟುಂಬ ಭೋಜನದ ನಂತರ ಅಬ್ದುಲ್ಲಾ (40), ಪತ್ನಿ ನಸ್ರೀನ್ (35), ಪುತ್ರಿಯರಾದ ಜೈನಾಬ್ (13) ಮತ್ತು ಆಯೇಷಾ (16) ಅನಾರೋಗ್ಯಕ್ಕೆ ಒಳಗಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುಟುಂಬವು ಇತರ ಐದು ಅತಿಥಿಗಳೊಂದಿಗೆ ಚಿಕನ್ ಪುಲಾವ್ ತಿಂದಿದ್ದಾರೆ. ಬಳಿಕ ಮನೆಗೆ ತೆರಳಿ ಕಲ್ಲಂಗಡಿ ಸೇವಿಸಿದ್ದಾರೆ. ಬಳಿಕ ಅವರಿಗೆಲ್ಲಾ ವಾಂತಿ ಮತ್ತು ತಲೆತಿರುಗುವಿಕೆ ಆರಂಭವಾಗಿದೆ. ಆ ಕೂಡಲೇ ದಂಪತಿ ಮತ್ತು ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನೆಲ್ಲ ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದಾಗ್ಯೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮೇಲ್ನೋಟಕ್ಕೆ ಕಲ್ಲಂಗಡಿ ವಿಷಪೂರಿತವಾಗಿದ್ದಿರಬಹುದು ಎನಿಸುತ್ತಿದೆ. ಏಕೆಂದರೆ ಪುಲಾವ್ ಮಾತ್ರ ತಿಂದವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಕಾಣಿಸಿಲ್ಲ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಾವಿಗೆ ಕಾರಣವನ್ನು ದೃಢೀಕರಿಸಲು ಹಿಸ್ಟೋಪಾಥಾಲಜಿ ವರದಿಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.







