ಸಮಗ್ರ ನ್ಯೂಸ್: ದೇಶದಲ್ಲಿ ಅವಧಿಗೂ ಮುನ್ನವೇ ಆರಂಭವಾಗಿರುವ ಭೀಕರ ಬೇಸಿಗೆಯ ನಡುವೆ, ಈ ವರ್ಷ ಭಾರತಕ್ಕೆ ಭೀಕರ ಬರಗಾಲದ ಆತಂಕ ಎದುರಾಗಿದೆ. ಪೆಸಿಫಿಕ್ ಮಹಾಸಾಗರದಲ್ಲಿ ಪ್ರಬಲಗೊಳ್ಳುತ್ತಿರುವ ‘ಸೂಪರ್ ಎಲ್ ನಿನೋ’ ವಿದ್ಯಮಾನವು ಭಾರತದ ಮುಂಗಾರು ಮಾರುತಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
ಈಗಾಗಲೇ ದೇಶದ ಹಲವೆಡೆ ತಾಪಮಾನ ದಾಖಲೆ ಮಟ್ಟಕ್ಕೆ ಏರಿದೆ. ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದರೆ, ಉತ್ತರ ಭಾರತದ ಪಂಜಾಬ್, ದೆಹಲಿ, ರಾಜಸ್ಥಾನ ಸೇರಿದಂತೆ 5-6 ರಾಜ್ಯಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ಮುಟ್ಟಿದೆ. ಬಿಸಿಗಾಳಿಯ ಆರ್ಭಟಕ್ಕೆ ಜನ ಮನೆಯಿಂದ ಹೊರಬರಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪೆಸಿಫಿಕ್ ಮಹಾಸಾಗರದಲ್ಲಿ ಪ್ರತಿ 2-7 ವರ್ಷಕ್ಕೊಮ್ಮೆ ಸಂಭವಿಸುವ ನೈಸರ್ಗಿಕ ವಿದ್ಯಮಾನವೇ ಎಲ್ ನಿನೋ. ಸಮುದ್ರದ ಮೇಲ್ಮೈ ತಾಪಮಾನವು ಸಾಮಾನ್ಯಕ್ಕಿಂತ 0.5 ರಿಂದ 1.4 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುತ್ತದೆ.
ಸೂಪರ್ ಎಲ್ ನಿನೋ: ತಾಪಮಾನವು 2 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚು ಏರಿಕೆಯಾಗುತ್ತದೆ. ಇದರಿಂದ ಜಾಗತಿಕ ಮಳೆ ಮತ್ತು ತಾಪಮಾನ ವ್ಯವಸ್ಥೆಯಲ್ಲಿ ಏರುಪೇರಾಗಿ, ಭಾರತದಂತಹ ದೇಶಗಳಲ್ಲಿ ಮಳೆ ಕೊರತೆ ಉಂಟಾಗುತ್ತದೆ.
ಮಳೆ ಪ್ರಮಾಣ ಇಳಿಕೆಯಾಗಿ ಕೃಷಿ ಚಟುವಟಿಕೆಗಳಿಗೆ ಭಾರಿ ಹಿನ್ನಡೆಯಾಗಲಿದೆ. ಮಳೆ ತಗ್ಗಿದರೆ ಅಕ್ಕಿ, ಹತ್ತಿ ಹಾಗೂ ಸೋಯಾಬೀನ್ ಇಳುವರಿ ಕುಸಿಯಲಿದ್ದು, ರಫ್ತು ಪ್ರಮಾಣ ಕಡಿಮೆಯಾಗಲಿದೆ.
ಮಳೆ ಕಡಿಮೆಯಾದಲ್ಲಿ ಜಲವಿದ್ಯುತ್ ಉತ್ಪಾದನೆ ಕುಂಠಿತಗೊಳ್ಳಲಿದೆ. ರಾತ್ರಿ ವೇಳೆಯೂ ಕನಿಷ್ಠ ತಾಪಮಾನ ಏರಿಕೆಯಾಗಿ ಬಿಸಿಗಾಳಿಯ ಆರ್ಭಟ ಮುಂದುವರಿಯಲಿದೆ.
ಹಿರಿಯ ಹವಾಮಾನ ತಜ್ಞ ಡಾ. ಶ್ರೀನಿವಾಸರೆಡ್ಡಿ ಅವರ ಪ್ರಕಾರ, “ಸೂಪರ್ ಎಲ್ ನಿನೋ ಈ ಬಾರಿ ಮುಂಗಾರಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈಗಾಗಲೇ 2026ರ ಜನವರಿ-ಫೆಬ್ರವರಿ ಅವಧಿಯಲ್ಲಿ ಮಳೆ ಶೇ. 60 ರಷ್ಟು ಕಡಿಮೆಯಾಗಿದ್ದು, ಇದು ಮುಂಬರುವ ದಿನಗಳ ಭೀಕರತೆಗೆ ಮುನ್ಸೂಚನೆಯಾಗಿದೆ.
ಭಾರತದ ಆರ್ಥಿಕತೆಯ ಬೆನ್ನೆಲುಬಾದ ಕೃಷಿ ಕ್ಷೇತ್ರವು ಮಳೆಯನ್ನೇ ಅವಲಂಬಿಸಿರುವುದರಿಂದ, ಮಳೆ ಕೊರತೆಯು ದೇಶದ 1.5 ಶತಕೋಟಿ ಜನರ ಜೀವನೋಪಾಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ವರದಿ ತಿಳಿಸಿದೆ.







