ಸುಳ್ಯ: ಸ್ನೇಹಿತೆಯ ಮದುವೆಗೆಂದು ಬೆಂಗಳೂರಿನಿಂದ ಹೊರಟಿದ್ದ ಐಟಿ ಉದ್ಯೋಗಿಗಳ ಕಾರು ಚಾಲಕನ ಅರೆನಿದ್ರೆಯ ಕಾರಣದಿಂದ ಮರಕ್ಕೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಸುಳ್ಯದ ಮೂಲದ ಯುವತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಭೀಕರ ಘಟನೆಯು ಶನಿವಾರ ಬೆಳಿಗ್ಗೆ ಆದೋನಿ-ಸಿರುಗುಪ್ಪ ಮುಖ್ಯ ರಸ್ತೆಯಲ್ಲಿ ಸಂಭವಿಸಿದೆ.
ಸುಳ್ಯ ತಾಲೂಕಿನ ಕಂದಡ್ಕದ ಕ್ಷಿಪ್ರಾ (25) ಮೃತಪಟ್ಟ ದುರ್ದೈವಿ. ಇವರೊಂದಿಗೆ ಪ್ರಯಾಣಿಸುತ್ತಿದ್ದ ಪ್ರದೀಪ್ ಅವರ ಸ್ಥಿತಿ ಗಂಭೀರವಾಗಿದ್ದು, ಕೋಮಾ ಸ್ಥಿತಿಗೆ ತಲುಪಿದ್ದಾರೆ. ಉಳಿದಂತೆ ಅರ್ಪಿತಾ ಮತ್ತು ಶರ್ಮಿಳಾ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.
ಬೆಂಗಳೂರಿನ ‘ಆಟೋಲೀವ್ ಇಂಡಿಯಾ’ ಕಂಪನಿಯ ಈ ನಾಲ್ವರು ಉದ್ಯೋಗಿಗಳು ರಾಯಚೂರಿನ ಲಿಂಗಸುಗೂರಿನಲ್ಲಿ ನಡೆಯಲಿರುವ ಸಹೋದ್ಯೋಗಿ ನಂದಿನಿ ಅವರ ಮದುವೆಗೆಂದು ಶುಕ್ರವಾರ ರಾತ್ರಿ 11 ಗಂಟೆಗೆ ಹೊರಟಿದ್ದರು. ದಾರಿಯಲ್ಲಿ ಮಂತ್ರಾಲಯದ ರಾಘವೇಂದ್ರ ಸ್ವಾಮಿ ದರ್ಶನ ಪಡೆಯಲು ಮಾರ್ಗ ಬದಲಿಸಿದ್ದರು. ಶನಿವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಚಾಲನೆ ಮಾಡುತ್ತಿದ್ದ ಪ್ರದೀಪ್ ಅವರಿಗೆ ನಿದ್ರೆಯ ಮಂಪರು ಆವರಿಸಿದ್ದರಿಂದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಮುಂಭಾಗದ ಸೀಟಿನಲ್ಲಿದ್ದ ಕ್ಷಿಪ್ರಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಆದೋನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.






