ಸಮಗ್ರ ನ್ಯೂಸ್: ರಾಜ್ಯ ಮುಜರಾಯಿ ಇಲಾಖೆ ಶ್ರೀಮಂತ ದೇವಾಲಯಗಳ ಪಟ್ಟಿ ಬಿಡುಗಡೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಅಗ್ರಸ್ಥಾನ ಪಡೆದಿದೆ. ರಾಜ್ಯದ ಎ ಗ್ರೇಡ್ ದೇವಾಲಯಗಳ ಪೈಕಿ ಕರಾವಳಿ ದೇವಾಲಯಗಳೇ ಪಾರಮ್ಯ ಮೆರೆದಿವೆ.
ರಾಜ್ಯದ ದೇವಳಗಳ ಆದಾಯದಲ್ಲಿ ಟಾಪ್ 10ರಲ್ಲಿ ಕರಾವಳಿಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕೊಲ್ಲೂರು ಶ್ರೀಮೂಕಾಂಬಿಕಾ ದೇವಳ, ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದೇವಳ ಸ್ಥಾನ ಪಡೆದುಕೊಂಡಿವೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ 2023-24ರಲ್ಲಿ 146.01 ಕೋಟಿ ಆದಾಯ ಪಡೆದಿದ್ದರೆ, 2024-24ರಲ್ಲಿ 155.95 ಕೋಟಿ ರೂ. ಆದಾಯ ಗಳಿಸಿದೆ.
ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ 2023-24ರಲ್ಲಿ 146.1 ಕೋಟಿ ಇದ್ದ ಆದಾಯ 2024-25ರಲ್ಲಿ 155.95 ಕೋಟಿಗೆ ತಲುಪಿದೆ. ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ 2023-24ರಲ್ಲಿ 63.23 ಕೋಟಿ ಆದಾಯ ಬಂದಿತ್ತು. 2024-25ರಲ್ಲಿ 71.93 ಕೋಟಿಗೆ ತಲುಪಿದೆ. ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲದ ಆದಾಯ ಕುಸಿದಿದೆ. 2023-24ರಲ್ಲಿ 56.67 ಕೋಟಿ ಆದಾಯ ಬಂದಿತ್ತು. ಅದೇ ಆದಾಯ 2024-25ರಲ್ಲಿ 50.68 ಕೋಟಿಗೆ ಕುಸಿದಿದೆ.
ನಂಜನಗೂಡು ಶ್ರೀಕಂಠೇಶ್ವರ ದೇಗುಲದ ಆದಾಯ 30.36 ಕೋಟಿಯಿಂದ 36.12 ಕೋಟಿಗೆ ಏರಿಕೆ ಆಗಿದೆ. ಸವದತ್ತಿ ಯಲ್ಲಮ್ಮ ದೇಗುಲದ ಆದಾಯ 25.80 ಕೋಟಿಯಿಂದ 29.95 ಕೋಟಿಗೆ ಏರಿಕೆ ಆಗಿದೆ. ಯಡಿಯೂರು ಸಿದ್ಧಲಿಂಗೇಶ್ವರ ದೇಗುಲದ ಆದಾಯ 35.49 ಕೋಟಿಯಿಂದ 29.82 ಕೋಟಿಗೆ ಕುಸಿದಿದೆ.
ಹುಲಿಗಿಯ ಹುಲಿಗೆಮ್ಮ ದೇಗುಲದ ಆದಾಯ 16.29 ಕೋಟಿಯಿಂದ 17.30 ಕೋಟಿಗೆ ಏರಿಕೆಯಾಗಿದೆ. ಮಂದಾರ್ತಿ ದುರ್ಗಾಪರಮೇಶ್ವರಿ ದೇಗುಲದ ಆದಾಯ 15.27 ಕೋಟಿಯಿಂದ 16.54 ಕೋಟಿಗೆ ಏರಿಕೆ ಕಂಡಿದೆ. ಘಾಟಿ ಸುಬ್ರಹ್ಮಣ್ಯ ದೇಗುಲದ ಆದಾಯ 12.73 ಕೋಟಿಯಿಂದ 13.31 ಕೋಟಿಗೆ ತಲುಪಿದೆ. ಬೆಂಗಳೂರಿನ ಬನಶಂಕರಿ ದೇಗುಲದ ಆದಾಯ 11.95 ಕೋಟಿಯಿಂದ 11.38 ಕೋಟಿಗೆ ಕುಸಿತ ಕಂಡಿದೆ.
ವರ್ಷಾಂತ್ಯ ಆಗಮಿಸುತ್ತಿದ್ದಂತೆ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಮಂದಾರ್ತಿ, ಕಟೀಲು, ಕದ್ರಿ, ಮಂಗಳಾದೇವಿ, ಕಮಲಶಿಲೆ ದೇವಸ್ಥಾನಗಳಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ. ಕ್ರಿಸ್ಮಸ್ ರಜೆ, ವೀಕೆಂಡ್, ವರ್ಷಾಂತ್ಯ ಹಿನ್ನೆಲೆ ಕರಾವಳಿಯ ದೇವಳಗಳು, ಮಾಲ್, ಬೀಚ್ಗಳಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಾಗಿದೆ. ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ದೇವಾಲಯಗಳಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲೂ ಶೇ.10ರಿಂದ 15 ಏರಿಕೆ ಕಂಡಿದೆ.







