ಸಮಗ್ರ ನ್ಯೂಸ್: ಶುಕ್ರವಾರ (ನವೆಂಬರ್ 21) ಬೆಳಿಗ್ಗೆ ಬಾಂಗ್ಲಾದೇಶದಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. 26 ಸೆಕೆಂಡುಗಳ ಕಾಲ ಕಂಪನ ಸಂಭವಿಸಿದ್ದು, ಪೂರ್ವ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳಲ್ಲೂ ಪರಿಣಾಮ ಕಂಡು ಬಂದಿದೆ.
ಕೋಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಕೆಲವು ಭಾಗಗಳಲ್ಲಿ ಭೂಕಂಪದ ಅನುಭವವಾಗಿದ್ದು, ಜನರು ಭಯಭೀತರಾಗಿ ಕಟ್ಟಡಗಳಿಂದ ಹೊರಗೆ ಬಂಧಿದ್ದಾರೆ. ಭಾರತದಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಬಾಂಗ್ಲಾದೇಶ ಹವಾಮಾನ ಇಲಾಖೆ ಮತ್ತು ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಭೂಕಂಪದ ತೀವ್ರತೆಯನ್ನು 5.7 ಎಂದು ಅಂದಾಜಿಸಿದೆ. ಆದರೆ, ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) 5.5 ತೀವ್ರತೆ ಗುರುತಿಸಿದೆ.
ಭೂಕಂಪದ ಕೇಂದ್ರಬಿಂದುವು ಢಾಕಾದಿಂದ ಸುಮಾರು 40 ಕಿಮೀ (25 ಮೈಲುಗಳು) ಪೂರ್ವಕ್ಕೆ ನರಸಿಂಗಡಿ ನಗರದ ಪತ್ತೆಯಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ.
ಭೂಕಂಪದ ಕೇಂದ್ರ ಬಿಂದು ಬಾಂಗ್ಲಾದೇಶದ ನರಸಿಂಗಡಿಯಲ್ಲಿ ಪತ್ತೆಯಾಗಿದೆ ಅಂದರೆ, ಢಾಕಾದಿಂದ 10 ಕಿ.ಮೀ ಪೂರ್ವ-ಆಗ್ನೇಯ (ಇಎಸ್ಇ) ದೂರ ಮತ್ತು ಭೂಮಿಯ 10 ಕಿ.ಮೀ ಆಳದಲ್ಲಿ ಕಂಡು ಬಂದಿದೆ ಎಂದು ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ.
ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರು ತಮ್ಮ ಮನೆ ಮತ್ತು ಕಚೇರಿಗಳಿಂದ ಹೊರಗೆ ಓಡಿಬಂದಿದ್ದಾರೆ. ಭೂಕಂಪದಿಂದ ಜನರು ಭೀತಿಗೊಳಗಾಗಿದ್ದಾರೆ ಎಂದು ಭಾರತದ ವರದಿಗಳು ಹೇಳಿವೆ.







