ಸಮಗ್ರ ನ್ಯೂಸ್: ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ಪುಡಿ ರೌಡಿಗಳ ಗುಂಪೊಂದು ಮಾರಕಾಸ್ತ್ರಗಳನ್ನು ಹಿಡಿದು ದಾಂಧಲೆ ನಡೆಸಿ, ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಈ ಅಟ್ಟಹಾಸದಿಂದ ಹೆಣ್ಣೂರು ಬಡಾವಣೆಯ ನಿವಾಸಿಗಳು ಬೆಚ್ಚಿಬಿದ್ದಿದ್ದು, ಸ್ಥಳೀಯರ ಧೈರ್ಯದಿಂದ ಮೂವರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಘಟನೆ ತಡರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಹೆಣ್ಣೂರು ಬಡಾವಣೆಯ ದೊಡ್ಡೆರಾಮಣ್ಣ ಬಡಾವಣೆ ಬಳಿ ನಡೆದಿದೆ. ಸರ್ವಜ್ಞನಗರ ನಿವಾಸಿಗಳೆನ್ನಲಾದ ಐವರು ಯುವಕರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು.
ಈ ದಾಂಧಲೆಗೆ ಕಾರಣವಾದ ಸಣ್ಣ ವಿಷಯವು ಪಟಾಕಿ ಹೊಡೆಯುವ ವಿಚಾರವಾಗಿದೆ. ಆರೋಪಿಗಳಲ್ಲಿ ಒಬ್ಬನಾದ ಅಮೀನ್ ಷರೀಫ್ ರಾತ್ರಿ 10 ಗಂಟೆ ಸುಮಾರಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ, ಸ್ಥಳೀಯರು ಹೊಡೆಯುತ್ತಿದ್ದ ಪಟಾಕಿಯ ಸಣ್ಣ ಕಿಡಿಯೊಂದು ಷರೀಫ್ಗೆ ತಾಗಿತ್ತು ಎನ್ನಲಾಗಿದೆ. ಇದರಿಂದಾಗಿ ಅದೇ ಸ್ಥಳದಲ್ಲಿ ಷರೀಫ್ ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ಶುರುವಾಯಿತು.
ಗಲಾಟೆ ನಡೆದ ಕೆಲವೇ ನಿಮಿಷಗಳಲ್ಲಿ ಷರೀಫ್ ತನ್ನ ಸಹಚರರನ್ನು ಮತ್ತು ಸಂಬಂಧಿಕರನ್ನು ಕರೆದುಕೊಂಡು ಮಾರಕಾಸ್ತ್ರಗಳಾದ ಲಾಂಗು ಮತ್ತು ಮಚ್ಚುಗಳೊಂದಿಗೆ ವಾಪಸ್ ಬಂದಿದ್ದಾರೆ. ಬಂದ ಕೂಡಲೇ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ, ಕೆಲವರಿಗೆ ಹೆದರಿಸಿ-ಬೆದರಿಸಿದ್ದಾರೆ. ಮಾರಕಾಸ್ತ್ರಗಳೊಂದಿಗೆ ರಸ್ತೆಯಲ್ಲಿ ಪುಂಡರು ದಾಂಧಲೆ ನಡೆಸುತ್ತಿದ್ದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದಿದ್ದಾರೆ.
ಪುಡಿ ರೌಡಿಗಳ ಈ ಕೃತ್ಯದಿಂದ ಹೆದರದ ಸ್ಥಳೀಯ ಯುವಕರು ಒಂದಾಗಿ, ದಾಂಧಲೆ ನಡೆಸುತ್ತಿದ್ದ ಆರೋಪಿಗಳನ್ನು ಹಿಡಿದಿದ್ದಾರೆ. ಬಳಿಕ ಈ ಮೂವರು ಆರೋಪಿಗಳನ್ನು ಹೆಣ್ಣೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅಮೀನ್ ಷರೀಫ್, ಸೈಯದ್ ಅರ್ಬಾಸ್ ಮತ್ತು ಶೀದ್ ಖಾದರ್ ಎಂದು ಗುರುತಿಸಲಾಗಿದೆ. ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ಕಿರಣ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ವೇಳೆ, ಆರೋಪಿಗಳು ಏರಿಯಾದಲ್ಲಿ ತಮ್ಮ ‘ಹವಾ ಮೇಂಟೇನ್’ ಮಾಡಲು ಈ ಕೃತ್ಯವನ್ನು ಎಸಗಿದ್ದಾರೆ ಎಂಬುದು ತಿಳಿದುಬಂದಿದೆ. ಪೊಲೀಸರು ಆರೋಪಿಗಳ ವಿರುದ್ಧ ಆರ್ಮ್ಸ್ ಆಯಕ್ಟ್ (Arms Act) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.






