ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಇಳಿಮುಖವಾಗಿದ್ದ ಮಳೆ ಶನಿವಾರ ಬಿರುಸುಗೊಂಡಿದೆ. ಗ್ರಾಮೀಣ ಭಾಗಗಳಲ್ಲಿ ವೇಗವಾದ ಗಾಳಿ ಸಹಿತ ಮಳೆಯಾದ ಪರಿಣಾಮ ಮರಗಳು ಉರುಳಿ ಬಿದ್ದಿವೆ. ಕೃಷಿಗೂ ಹಾನಿ ಸಂಭವಿಸಿದೆ. ಸುಳ್ಯ ತಾಲೂಕಿನ ಗ್ರಾಮಾಂತರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹಲವಾರು ಕಡೆಗಳಲ್ಲಿ ನವರಾತ್ರಿಗೆ ಆಯೋಜನೆಗೊಂಡ ಕಾರ್ಯಕ್ರಮಗಳಿಗೆ ಅಡಚಣೆ ಉಂಟಾಯಿತು.
ಕರ್ನಾಟಕ ಕರಾವಳಿಯಲ್ಲಿ ಭಾನುವಾರ ಗಂಟೆಗೆ 50-60 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಐಎಂಡಿಯ ಮಾಹಿತಿಯಂತೆ ಸೆ.28ರ ವರೆಗೆ ಅರಬ್ಬಿ ಸಮುದ್ರದಲ್ಲಿ ಮಳೆ ಮತ್ತು ಭಾರೀ ಗಾಳಿ ಬೀಸುವುದರಿಂದ ಪ್ರಕ್ಷುಬ್ಧವಾಗಿರುತ್ತದೆ.
ಮಂಗಳೂರು ನಗರ ಹಾಗೂ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಮಧ್ಯಾಹ್ನ ಬಳಿಕ ರಾತ್ರಿಯ ತನಕ ವ್ಯಾಪಕ ವಾಹನ ದಟ್ಟಣೆ ಉಂಟಾಯಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾರದ ಹಿಂದೆ ಹಾಕಿದ್ದ ತೇಪೆ ಎದ್ದು ಹೋಗಿ ಮತ್ತೆ ಗುಂಡಿಗಳು ಉಂಟಾದ ಕಾರಣ ವಾಹನಗಳು ನಿಧಾನ ಗತಿಯಲ್ಲಿ ಸಂಚರಿಸಿದ್ದರಿಂದ ದಟ್ಟಣೆ ಉಂಟಾಯಿತು. ನಗರದೊಳಗೆ ಮಳೆ ಹಾಗೂ ಮಂಗಳೂರು ದಸರಾ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಕಾರಣ ವಾಹನ ದಟ್ಟಣೆ ಉಂಟಾಯಿತು.
ಬಂಗಾಳಕೊಲ್ಲಿಯ ಒಡಿಸ್ಸಾ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಗಾಳಿ ಚಲಿಸುವ ಪಥದ ನಿಖರತೆ ಇನ್ನೂ ಸ್ಪಷ್ಟವಾಗಿಲ್ಲ. ಇದರ ಪರಿಣಾಮ ಮಳೆ ಸ್ವಲ್ಪ ಚುರುಕಾಗಿದ್ದು, ರಾಜ್ಯದಲ್ಲಿ ಒಂದು ವಾರದ ಕಾಲ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸೆ.28ರಂದು ಮಹಾರಾಷ್ಟ್ರ ಪ್ರವೇಶಿಸಿ ಸೆ. 29, 30ರಂದು ಮುಂಬಯಿ ಕರಾವಳಿಗೆ ಬರುವ ಸಾಧ್ಯತೆಯಿದೆ. ಈ ಕಾರಣದಿಂದ ಮುಂಬಯಿಯಿಂದ ಕೇರಳ ಕರಾವಳಿ ತೀರದ ವರೆಗೆ ಮಳೆ ಬರುವ ಸಾಧ್ಯತೆಯಿದೆ. ಮುಂಗಾರು ಮಳೆ ಮೂರನೇ ವಾರದಲ್ಲಿ ಕ್ಷೀಣಿಸಿದ ಬಳಿಕ ಹಿಂಗಾರು ಆರಂಭವಾಗುವ ಸಾಧ್ಯತೆಯಿದೆ ಎಂದು ಐಎಂಡಿ ವಿಜ್ಞಾನಿ ಸೂಚನೆ ನೀಡಿದ್ದಾರೆ.







