ಸಮಗ್ರ ನ್ಯೂಸ್: ಅಕ್ರಮ-ಸಕ್ರಮ ಮಂಜೂರಾತಿಗೆ ಮಾಜಿ ಶಾಸಕ ಲಂಚ ಪಡೆದಿದ್ದು ಮಹಾಲಿಂಗೇಶ್ವರ ದೇವಸ್ಥಾನದ ನಡೆಯಲ್ಲಿ ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದ ಪುತ್ತೂರು ಶಾಸಕ ಅಶೋಕ್ ರೈ ಹೇಳಿಕೆಗೆ ಇದೀಗ ಬಿಜೆಪಿ ಪ್ರತಿಸವಾಲು ಹಾಕಿದ್ದು, ಶಾಸಕರು ಲಂಚ ನೀಡಿದ್ದ 47 ಜನರನ್ನು ಕರೆದುಕೊಂಡು ಬರಲಿ ಎಂದಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರ್ ಪುತ್ತೂರು ಶಾಸಕರು ನೀಡಿದ ಸವಾಲನನ್ನು ಸ್ವೀಕರಿಸುವುದಾಗಿ ಹೇಳಿದ್ದು, ಶಾಸಕರು ಲಂಚ ನೀಡಿದ 47 ಜನರನ್ನು ಕರೆದುಕೊಂಡು ಬರಬೇಕು, ನಾವು ಮಾಜಿ ಶಾಸಕರನ್ನು, ಅಕ್ರಮ-ಸಕ್ರಮ ಸಮಿತಿಯ ಸದಸ್ಯರನ್ನು ಕರೆತರುತ್ತೇವೆ ಎಂದರು.
ಎಲ್ಲಿ,ಯಾವ ಜಾಗಕ್ಕೆ ಬರಬೇಕು ಅನ್ನೋದನ್ನ ಶಾಸಕರೇ ತೀರ್ಮಾನ ಮಾಡಲಿ. ಒಂದು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಬಿಜೆಪಿ ಶಾಸಕರನ್ನ ಪ್ರಶ್ನೆ ಮಾಡಿಯೇ ಮಾಡುತ್ತೆ, ಮಾಜಿ ಶಾಸಕರು ಕೊರೊನಾ ಸಂದರ್ಭದ ಅವಧಿಯನ್ನು ಹೊರತುಪಡಿಸಿ ಸಿಕ್ಕಿದ ಸಮಯದಲ್ಲಿ ಸಾವಿರಾರು ಜನರಿಗೆ ಅಕ್ರಮ-ಸಕ್ರಮ ಜಾಗ ಮಂಜೂರು ಮಾಡಿದ್ದಾರೆ. ಯಾವುದೇ ಜಾತಿ-ಧರ್ಮ ನೋಡಿ ಈ ಕಾರ್ಯ ಮಾಡಿಲ್ಲ. ಪುತ್ತೂರು ಶಾಸಕರು ತಕ್ಷಣವೇ ಬಿಜೆಪಿ ಸವಾಲನ್ನು ಸ್ವೀಕರಿಸಬೇಕು ಎಂದು ದಯಾನಂದ ಉಜಿರೆಮಾರ್ ಒತ್ತಾಯಿಸಿದ್ದಾರೆ.







