ಸಮಗ್ರ ನ್ಯೂಸ್: ಕೊಡಗಿನಲ್ಲಿ ಕೆಲ ದಿನಗಳಿಂದ ಮಳೆಗಾಲದ ಮಾಮೂಲಿ ಮಳೆಯಂತೆ ಧಾರಾಕಾರ ಮಳೆಯಾಗುತ್ತಿದ್ದು, ಈ ವೇಳೆ ಕಾಡಿಗೆ ಮೇಯಲು ಬಿಟ್ಟ ಹಸುಗಳಿಗೆ ಹಸುಗಳ ಮಾಲೀಕರು ಅವುಗಳು ಒದ್ದೆಯಾಗದಂತೆ ಪ್ಲಾಸ್ಟಿಕ್ ರೈನ್ಕೋಟ್ ಹಾಕಿದಂತಹ ವಿಶೇಷ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Coorgthekashmirofkarnataka ಎಂಬ ಇನ್ಸ್ಟಾ ಗ್ರಾಮ್ ಪೇಜ್ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ವೀಡಿಯೋದಲ್ಲಿ ಬಯಲಿನಲ್ಲಿ ಮೇಯುತ್ತಿರುವ ಎರಡು ಹಸುಗಳಿಗೆ ಒದ್ದೆಯಾಗದಂತೆ ಪ್ಲಾಸ್ಟಿಕ್ ಗೊರಬೆಯನ್ನು ಹಾಕಿರುವುದನ್ನು ಕಾಣಬಹುದಾಗಿದೆ.
ನಾಪೋಕ್ಲು ಭಾಗಮಂಡಲ ರಸ್ತೆಯ ಬಲ್ಲಮಾವಟಿಯಲ್ಲಿ ಅತಿಯಾದ ಮಳೆಯ ಕಾರಣ ಮೇಯಲು ಬಿಟ್ಟ ಹಸುಗಳಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಿ ಮಳೆಯಿಂದ ನೆನೆಯುವುದನ್ನು ತಪ್ಪಿಸಿದ ಮಾಲಿಕ ಎಂದು ಬರೆದು ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಸಾಮಾನ್ಯವಾಗಿ ಹಸುಗಳಿಗೆ ಈ ಮಳೆಗಾಲದ ಮಳೆಯಿಂದ ಅಂತ ಹಾನಿಯೇನು ಆಗುವುವುದಿಲ್ಲ, ಮಳೆಯಲ್ಲೇ ನೆನೆದರು ಆರೋಗ್ಯಕ್ಕೆ ಹಾನಿಯಾಗದಂತೆ ಅವು ಪ್ರಕೃತಿದತ್ತವಾಗಿ ಸಾಮರ್ಥ್ಯವನ್ನು ಹೊಂದಿವೆ. ಆದರೆ ಇಲ್ಲಿ ಅವುಗಳ ಮಾಲೀಕ ಅವುಗಳ ಮೇಲೆ ತೋರಿಸಿರುವ ಪ್ರೀತಿ ಎದ್ದು ಕಾಣುತ್ತದೆ. ಸಾಮಾನ್ಯವಾಗಿ ಮನುಷ್ಯರಿಗೆ ಮಳೆಯಲ್ಲಿ ನಿರಂತರ ನೆನೆದರೆ ಚಳಿ ಜ್ವರ ಬರುವುದುಂಟು, ಸೋ ಅದೇ ರೀತಿ ಇಲ್ಲಿ ಮಾಲೀಕ ತನ್ನ ಹಸುಗಳಿಗೆ ಹುಷಾರು ತಪ್ಪಬಹುದೇನೋ ಅಥವಾ ಮಳೆಗೆ ನೆನೆದು ಚಳಿಯಾಗಬಹುದೇನೋ ಎಂಬ ಕಾಳಜಿಯಿಂದ ಅವುಗಳಿಗೆ ಪ್ಲಾಸ್ಟಿಕ್ ಗೊರಬೆಯನ್ನು ಹಾಕಿದ್ದು, ಈ ವೀಡಿಯೋ ಭಾರಿ ವೈರಲ್ ಆಗಿದೆ.







