ಸಮಗ್ರ ನ್ಯೂಸ್: ಬಾವಿಗೆ ರಿಂಗ್ ಹಾಕುವ ವೇಳೆ ಆಮ್ಲಜನಕದ ಕೊರತೆಯುಂಟಾಗಿ ಕಾರ್ಮಿಕರಿಬ್ಬರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ಮಂಗಳವಾರ ನಡೆದಿದೆ. ಕುಕ್ಕಿಲ ನಿವಾಸಿ ಪ್ರಸ್ತುತ ಪರ್ತಿಪ್ಪಾಡಿಯಲ್ಲಿ ವಾಸವಿರುವ ಇಬ್ಬು ಯಾನೆ ಇಬ್ರಾಹಿಂ ಮತ್ತು ಮಲಾರ್ ನಿವಾಸಿ ಆಲಿ ಸಾವನ್ನಪ್ಪಿದವರು.
ಅಳಕೆ ಸಮೀಪ ಪಡಿಬಾಗಿಲಿನಲ್ಲಿ ಸುಮಾರು 30 ಅಡಿ ಆಳದ ಬಾವಿಗೆ ರಿಂಗ್ ಹಾಕಿ ನಂತರ ಕ್ಲೀನಿಂಗ್ ಮಾಡಲೆಂದು ಓರ್ವ ಕಾರ್ಮಿಕ ಬಾವಿಗಿಳಿದಿದ್ದರು. ಕೆಳಗಿಳಿದವರು ಮೇಲೆರಲಾರದೆ ಒದ್ದಾಟ ನಡೆಸುತ್ತಿರುವುದನ್ನು ಕಂಡ ಮತ್ತೊಬ್ಬರು ಅವರ ಸಹಾಯಕ್ಕೆಂದು ಕೆಳಗಿಳಿದಿದ್ದರು. ಕೆಳಗಿಳಿದ ಇಬ್ಬರಿಗೂ ಆಮ್ಲಜನಕದ ಕೊರತೆ ಉಂಟಾಯಿತು ಎನ್ನಲಾಗಿದೆ.
ಈ ಸಂದರ್ಭ ಇಬ್ಬರೂ ಹೊರಬಾರಲಾಗದೆ ಸಾವನ್ನಪ್ಪಿದ್ದಾರೆ. ನಂತರ ಸ್ಥಳಿಯರ ಸಹಾಯದಿಂದ ಫ್ರೆಂಡ್ಸ್ ವಿಟ್ಲ ಮುರಳೀಧರ ಅವರ ನೇತೃತ್ವದ ತಂಡ ಎರಡು ಶವಗಳನ್ನು ಮೇಲಕ್ಕೆತ್ತಿದರು. ಮೃತದೇಹಗಳನ್ನು ವಿಟ್ಲ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಇಬ್ರಾಹಿಂ ಅವರು ಕಳೆದ ಇಪ್ಪತ್ತು ವರ್ಷದಿಂದ ರಿಂಗ್ ಹಾಕುವ ಕೆಲಸದಲ್ಲಿ ಪರಿಣತರಾಗಿದ್ದರು. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.



























