ಸಮಗ್ರ ನ್ಯೂಸ್ : ಮಡಿಕೇರಿ ತಾಲೂಕಿನ ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಪೋಕ್ಷೇತ್ರ ಮನೆಹಳ್ಳಿ ಮಠಕ್ಕೆ ಯದುವಂಶದ ಮಹಾರಾಜರು ಭೇಟಿ ನೀಡಿ, ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ ಸಲ್ಲಿಸಿ, ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಮೈಸೂರಿನ ರಾಜ ವಂಶಸ್ಥ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕ್ಷೇತ್ರದ ಆರಾದ್ಯ ದೈವ ವೀರಭದ್ರ ಸ್ವಾಮಿ, ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಸನ್ನಿಧಾನದಲ್ಲಿ ಮಠದ ಪೀಠಾಧ್ಯಕ್ಷರಾದ ಶ್ರೀ.ಮಹಾಂತ ಶಿವಲಿಂಗ ಸ್ವಾಮೀಜಿ ನೇತೃತ್ವ ಹಾಗೂ ಜಿಲ್ಲೆಯ ಎಲ್ಲಾ ಸ್ವಾಮೀಜಿಗಳ ಸಮ್ಮುಖದಲ್ಲಿ ಮಳೆ, ಬೆಳೆ, ಪ್ರಜೆಗಳ ಕಲ್ಯಾಣಕ್ಕಾಗಿ ಅಷ್ಟೋತ್ತರ, ಅರ್ಚನೆ ಹಾಗೂ ವಿಶೇಷ ಪೂಜೆ ನೆರವೇರಿಸಿದರು.
ನಂತರ ಬಿಲ್ವ ಗೋ ಶಾಲೆಗೆ ಭೇಟಿನೀಡಿದ ಅವರು ಗೋವುಗಳಿಗೆ ಹಣ್ಣು ಹಂಪಲು ತಿನ್ನಿಸಿ ನಮಿಸಿದರು. ನಂತರ ಮಾತನಾಡಿದ ಅವರು ಇಂದು ಸಾಕಷ್ಟು ಸವಾಲುಗಳಿವೆ ಅವುಗಳನ್ನು ಮೆಟ್ಟಿನಿಂತು ಅಭಿವೃದ್ದಿ ಸಾಧಿಸಬೇಕಾಗಿದೆ. ಇಂದು ಲೋಕಕಲ್ಯಾಣಕ್ಕಾಗಿ ಭಗವಂತನ ಮೊರೆಹೊಕ್ಕಿದ್ದೇವೆ ಎಲ್ಲಾ ಗುರುಗಳ ಮಾರ್ಗದರ್ಶನ, ಆಶೀರ್ವಾದ ವಿರಲಿ ಎಂದರು.
ಈ ಸಂದರ್ಭ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ಕೊಡಗು ಹಾಸನ ಮಠಧೀಶರ ಪರಿಷತ್ತಿನ ಪ್ರದಾನ ಕಾರ್ಯದರ್ಶಿ ಮುದ್ದಿನಕಟ್ಟೆ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕಾರ್ಯದರ್ಶಿ ಕಿರಿಕೂಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ತೊರೆನೋರು ಮಠದ ಮಲ್ಲೇಶ ಸ್ವಾಮೀಜಿ ,ಶಿಡಿಗಳಲೇ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ವಿರಕ್ತ ಮಠದ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಜವೇನಳ್ಳಿ ಮಠದ ಸ್ವಾಮೀಜಿ ಉಪಸ್ಥಿತರಿದ್ದರು.
ತಪೋಕ್ಷೇತ್ರದ ನಾಗರ ಕಟ್ಟೆ ಬಳಿಯಿಂದ ಯದುವೀರ್ ಒಡೆಯರ್ ರವರನ್ನು ಮಂಗಳ ವಾದ್ಯ,ವೀರಗಾಸೆ ಹಾಗೂ ಪೂರ್ಣಕುಂಬ ಕಲಶ ದೊಂದಿಗೆ ದೇವಾಲಯಕ್ಕೆ ಕರೆತರಲಾಯಿತು.


















