ಸಮಗ್ರ ನ್ಯೂಸ್: ಕೇರಳ ಅರಣ್ಯ ಇಲಾಖೆಯು ಶಬರಿಮಲೆ ಯಾತ್ರಾರ್ಥಿಗಳಿಗಾಗಿ ಮಾರ್ಗದರ್ಶನ ನೀಡುವ ಸಲುವಾಗಿ ‘ಅಯ್ಯನ್’ ಎಂಬ ಹೊಸ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದೆ. ಶಬರಿಮಲೆಗೆ ಬರುವ ಯಾತ್ರಿಕರು ಮುಂಬರುವ ಮಂಡಲ ಪೂಜೆ ಹಾಗೂ ಮಕರ ಸಂಕ್ರಾಂತಿ ಪೂಜೆ ಋತುವಿನಲ್ಲಿ ಈ ಆ್ಯಪ್ ಬಳಸಬಹುದಾಗಿದೆ.
ಮಲಯಾಳಂ, ಕನ್ನಡ ಸೇರಿ ದಕ್ಷಿಣ ಭಾರತದ ಎಲ್ಲ ನಾಲ್ಕು ಭಾಷೆಗಳು ಹಾಗೂ ಹಿಂದಿಯಲ್ಲಿ ಮಾರ್ಗಸೂಚಿಗಳು ಮತ್ತು ಮಾಹಿತಿಯನ್ನು ನೀಡಲಿದೆ. ಪಂಪಾ – ಸನ್ನಿಧಾನಂ ಮಾರ್ಗಗಳಲ್ಲಿ ಲಭ್ಯವಿರುವ ಸೇವೆಗಳ ಕುರಿತು ಈ ಆ್ಯಪ್ ಮೂಲಕ ತಿಳಿಯಬಹುದಾಗಿದೆ. ಇದರ ಜೊತೆಗೆ ಸೇವಾ ಕೇಂದ್ರಗಳು, ವೈದ್ಯಕೀಯ ತುರ್ತು ಚಿಕಿತ್ಸಾ ಘಟಕ, ವಸತಿ, ಆನೆಗಳ ಬಗ್ಗೆ ಮಾಹಿತಿಯನ್ನೂ ಆ್ಯಪ್ ಒಳಗೊಂಡಿದೆ.
ಸ್ಮಾಡ್ ತಂಡ, ಸಾರ್ವಜನಿಕ ಶೌಚಾಲಯಗಳು, ಪ್ರತಿ ಬೇಸ್ನಿಂದ ಸನ್ನಿಧಾನಂವರೆಗಿನ ಅಂತರ, ಅಗ್ನಿಶಾಮಕ ದಳ, ಪೊಲೀಸ್ ಸಹಾಯ ಪೋಸ್ಟ್, ಇಕೋ ಶಾಪ್, ಉಚಿತ ಕುಡಿಯುವ ನೀರಿನ ವಿತರಣಾ ಕೇಂದ್ರಗಳು ಮತ್ತು ಸಾಂಪ್ರದಾಯಿಕ ಟ್ರೆಕ್ಕಿಂಗ್ ಮಾರ್ಗಗಳಲ್ಲಿ ಒಂದು ಸ್ಥಳದಿಂದ ಮುಂದಿನ ಕೇಂದ್ರಗಳಿಗೆ ದೂರ, ಶಬರಿಮಲೆ ಯಾತ್ರೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಆಚರಣೆಗಳು ಮತ್ತು ಸಾಮಾನ್ಯ ಮಾರ್ಗಸೂಚಿಗಳನ್ನು ಸಹ ಹೊಸ ಆ್ಯಪ್ನಲ್ಲಿ ವಿವರಿಸಲಾಗಿದೆ.
ಪೆರಿಯಾರ್ ವನ್ಯಜೀವಿ ಅಭಯಾರಣ್ಯದ ಜೈವಿಕ ವೈವಿಧ್ಯತೆ ಮತ್ತು ಶ್ರೀಮಂತಿಕೆಯ ಒಳನೋಟವನ್ನೂ ಯಾತ್ರಾರ್ಥಿಗಳಿಗೆ ಇದು ವಿವರಿಸುತ್ತದೆ. ಶಬರಿಮಲೆ ದೇವಸ್ಥಾನದ ಬಗ್ಗೆ ಎಲ್ಲ ಪೂಜೆ ಮತ್ತು ಕೊಡುಗೆ ವಿವರಗಳು ಮತ್ತು ಇತರ ಮಾಹಿತಿ ಸಹ ಅಪ್ಲಿಕೇಶನ್ನಲ್ಲಿ ಲಭ್ಯವಿದೆ.
ಈ ‘ಅಯ್ಯನ್’ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಇದು ಯಾವುದೇ ಸ್ಮಾರ್ಟ್ಫೋನ್ನಲ್ಲೂ ಕಾರ್ಯನಿರ್ವಹಿಸುತ್ತದೆ







