ಸಮಗ್ರ ನ್ಯೂಸ್: ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ನೀರು ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ್ದಾರೆ. ಸಭಾ ಕಾರ್ಯಕ್ರಮದಲ್ಲೇ ನಿರ್ಣಯವಾದ ಈ ಘೋಷಣೆಯ ಹಿಂದೆ ಒಂದು ರೋಚಕ ಚೀಟಿ ಕತೆ ಇದೆ!
ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ 68ನೇ ಕನ್ನಡ ರಾಜ್ಯೋತ್ಸವ ಆಯೋಜಿಸಲಾಗಿತ್ತು. ಸಿದ್ದರಾಮಯ್ಯ ಅವರ ಪೂರ್ವನಿಗದಿತ ಭಾಷಣದಲ್ಲಿ ಉಚಿತ ವಿದ್ಯುತ್ ಮತ್ತು ನೀರಿನ ವಿಚಾರವೇ ಇರಲಿಲ್ಲ. ಅದೆಲ್ಲವೂ ಪ್ರಸ್ತಾವನೆಯಾಗಿ, ಚರ್ಚೆಯಾಗಿ, ಅಧ್ಯಯನವಾಗಿ, ಘೋಷಣೆಯಾಗಿದ್ದೆಲ್ಲವೂ ವೇದಿಕೆಯಲ್ಲೇ. ಇದಕ್ಕೆಲ್ಲ ಮೂಲ ಕಾರಣವಾಗಿದ್ದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಅವರು ಕೊಟ್ಟ ಒಂದು ಚೀಟಿ.
ಇದು ಆಗಿದ್ದು ಹೇಗೆಂದರೆ, ಕಾರ್ಯಕ್ರಮದಲ್ಲಿ ಕುಳಿತಿದ್ದ ನುಗ್ಲಿ ಅವರಿಗೆ ಸಿಎಂ ಅವರು ಆಗಾಗ ದೇವಸ್ಥಾನಗಳಿಗೆ ಉಚಿತ ನೀರು ಮತ್ತು ವಿದ್ಯುತ್ ಪೂರೈಸುವ ಚಿಂತನೆ ಇದೆ ಎಂದು ಹೇಳುತ್ತಿದ್ದುದು ನೆನಪಾಯಿತಂತೆ. ಆಗ ಅವರಿಗೆ ದೇಗುಲಗಳಂತೆಯೇ ಜ್ಞಾನ ದೇಗುಲಗಳಿಗೂ ಉಚಿತ ವಿದ್ಯುತ್ ಮತ್ತು ನೀರು ನೀಡುವುದನ್ನು ಘೋಷಿಸಿದರೆ ಇದೊಂದು ಐತಿಹಾಸಿಕ ತೀರ್ಮಾನವಾಗಲಿದೆ ಎಂಬ ಯೋಚನೆ ಹೊಳೆಯಿತಂತೆ. ಆ ಕ್ಷಣವೇ ಅವರು ತಮ್ಮ ಯೋಚನೆಯನ್ನು ಸಿಎಂ ಅವರಿಗೆ ತಲುಪಿಸಲು ನಿರ್ಧರಿಸಿದರು. ಕೂಡಲೇ ಚೀಟಿಯೊಂದನ್ನು ಬರೆದರು.
”ಸರ್, ದಯಮಾಡಿ..
ನೀವು ಈಗಾಗಲೇ ರಾಜ್ಯದ ಜನತೆಗೆ ಉಚಿತ ವಿದ್ಯುತ್ ನೀಡಿದ್ದೀರಿ. ದೇವಾಲಯಗಳಿಗೆ ಉಚಿತ ವಿದ್ಯುತ್ ನೀಡುವ ಚಿಂತನೆ ಇದೆ.. ಪ್ಲೀಸ್ ರಾಜ್ಯದ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ಕುಡಿಯುವ ನೀರನ್ನು ನೀಡುವ ಐತಿಹಾಸಿಕ ತೀರ್ಮಾನ ಮಾಡಿ ಸರ್. ರಾಜ್ಯೋತ್ಸವದ ಕೊಡುಗೆಯಾಗಿ.. ಇದು ತಮ್ಮಿಂದ ಮಾತ್ರ ಸಾಧ್ಯ ಸರ್ʼʼ ಎಂದು ಬರೆದು ಮಾಧ್ಯಮ ಸಲಹೆಗಾರರ ಮೂಲಕ ಸಿಎಂ ಅವರಿಗೆ ಕಳುಹಿಸಿದರು. ಮುಂದೆ ಚಕಚಕನೆ ಕೆಲಸಗಳು ನಡೆದವು. ವೇದಿಕೆಯಲ್ಲೇ ಅಧಿಕಾರಿಗಳ ಜತೆ ಚರ್ಚೆ ನಡೆದು ಐತಿಹಾಸಿಕ ತೀರ್ಮಾನ ಪ್ರಕಟವಾಯಿತು.
ಬಳಿಕ ಸಿಎಂ ಭಾಷಣದಲ್ಲಿ, ಇದೀಗ ಸಂಘದವರು ನನಗೆ ಒಂದು ಚೀಟಿಯನ್ನು ನೀಡಿದ್ದಾರೆ, ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ಕುಡಿಯುವ ನೀರನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ. ಇಂದಿನಿಂದಲೇ ಆದೇಶವನ್ನು ಜಾರಿ ಗೊಳಿಸುತ್ತೇನೆ. ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ಕುಡಿಯುವ ನೀರನ್ನು ಕೊಡುವಂತಹ ತೀರ್ಮಾನವನ್ನು ಮಾಡಿದ್ದೇವೆಂದು ಘೋಷಣೆಯನ್ನು ಮಾಡಿದರು.




























