ಸಮಗ್ರ ನ್ಯೂಸ್: ವಾರಂಟ್ ಜಾರಿಯಾಗಿದ್ದರೂ ನ್ಯಾಯಾಲಯದ ವಿಚಾರಣೆ ಹಾಜರಾಗದ ಕನ್ನಡ ಚಿತ್ರನಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ವಿನೋಬಾನಗರ ಠಾಣೆಯ ಪೊಲೀಸರು ಈ ಕ್ರಮವನ್ನು ಜರುಗಿಸಿದ್ದಾರೆ.
ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಾರಂಟ್ ಜಾರಿಯಾಗಿದ್ದರೂ ನಟಿ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿನೋಬಾನಗರ ಠಾಣೆಯ ಪೊಲೀಸರು ಕನ್ನಡ ಚಿತ್ರನಟಿಯನ್ನು ಇಂದು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ಉಷಾ ಎಂಬಾಕೆಯೇ ಬಂಧಿತ ನಟಿ. ಈಕೆಯನ್ನು ಬಂಧಿಸಿರುವ ಪೊಲೀಸರು, ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ನಟಿ ಉಷಾ ವಿರುದ್ಧ ಶಿವಮೊಗ್ಗದ ಶರವಣನ್ ಎಂಬವರು ವಂಚನೆ ದೂರು ನೀಡಿದ್ದರು.
ತನ್ನಿಂದ ಹಣ ಪಡೆದ ಉಷಾ ಮರಳಿಸಿಲ್ಲ ಎಂದು ಆರೋಪಿಸಿ ಶರವಣನ್ ಶಿವಮೊಗ್ಗ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ವಿಚಾರಣೆಗೆ ನಟಿ ಉಷಾ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯವು ಜಾಮೀನುರಹಿತ ಬಂಧನ ವಾರಂಟ್ ಜಾರಿಗೊಳಿಸಿತ್ತು.
ಈ ಕನ್ನಡದ ‘ಸಲಗ’ ಸಿನಿಮಾದಲ್ಲಿ ಸಹ ಕಲಾವಿದೆಯಾಗಿ ಅಭಿನಯಿಸಿದ್ದರು. ಜತೆಗೆ ಕೆಲವು ಧಾರವಾಹಿಗಳಲ್ಲೂ ನಟಿಸುತ್ತಿದ್ದಾರೆ. ಶರವಣನ್ ಕೂಡ ಧಾರವಾಹಿಗಳಲ್ಲಿ ನಟಿಸಿದ್ದರು.
ಮಧ್ಯಂತರ ಜಾಮೀನು: ಬಂಧನವಾದ ಬೆನ್ನಿಗೇ ಶಿವಮೊಗ್ಗದ ಜೆಎಂಎಫ್ಸಿ ಮೂರನೇ ನ್ಯಾಯಾಲಯದ ನ್ಯಾಯಾಧೀಶರಿಂದ ನಟಿ ಉಷಾಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಆದರೆ ನಟಿ ನಾಳೆ ಮತ್ತೆ ಜಾಮೀನು ಪಡೆಯಲೇಬೇಕಿದೆ. ಅಲ್ಲಿಯವರೆಗೆ ಮಧ್ಯಂತರ ಜಾಮೀನಿನ ಮೇಲೆ ಹೊರಗಿರಲು ಅವಕಾಶ ಕಲ್ಪಿಸಲಾಗಿದೆ.
ಸಂಜೆ ನಂತರ ಶಿವಮೊಗ್ಗದ ನ್ಯಾಯಾಧೀಶೆ ಅವರ ಮನೆಗೆ ವಿನೋಬಾನಗರ ಪೊಲೀಸರು ನಟಿ ಉಷಾಳನ್ನು ಹಾಜರುಪಡಿಸಿದ್ದರು. ನಟಿ ಉಷಾ ಪರವಾಗಿ ನ್ಯಾಯವಾದಿ ಜಾಮೀನು ಅರ್ಜಿ ಸಲ್ಲಿಸಿದ್ದರು.


















