ಸಮಗ್ರ ನ್ಯೂಸ್: ಜಮೀನು ವಿವಾದದ ಗಲಾಟೆಯಲ್ಲಿ ಒಂದೇ ಕುಟುಂಬದ ಆರು ಸದಸ್ಯರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಶುಕ್ರವಾರ ಮಧ್ಯಪ್ರದೇಶದ ಮೊರೆನಾದಲ್ಲಿ ನಡೆದಿದೆ.
ಘಟನೆಯ ಆಘಾತಕಾರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ವೀಡಿಯೋದಲ್ಲಿ ಇಬ್ಬರು ರೈಫಲ್ ಗಳನ್ನು ಹಿಡಿದು ಇನ್ನೊಂದು ಗುಂಪಿನ ಕಡೆ ಗುಂಡು ಹಾರಿಸಿರುವುದು ದಾಖಲಾಗಿದೆ. ನಂತರ ಕೆಲವರು ಅವರನ್ನು ಕೋಲುಗಳಿಂದ ಥಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಧೀರ್ ಸಿಂಗ್ ತೋಮರ್ ಮತ್ತು ಗಜೇಂದ್ರ ಸಿಂಗ್ ತೋಮರ್ ಕುಟುಂಬಗಳ ನಡುವೆ 2013ರಲ್ಲಿ ತ್ಯಾಜ್ಯ ಸುರಿಯುವ ವಿಚಾರದಲ್ಲಿ ಕಳಹವಾಗಿತ್ತು. ಆ ಸಂಧರ್ಭದಲ್ಲಿ ಧೀರ್ ಸಿಂಗ್ ತೋಮರ್ ಕುಟುಂಬದ ಇಬ್ಬರು ಸಾವನ್ನಪ್ಪಿದ್ದರು. ಈ ವೇಳೆ ಗಜೇಂದ್ರ ಸಿಂಗ್ ತೋಮರ್ ಕುಟುಂಬವು ಗ್ರಾಮದಿಂದ ಪಲಾಯನ ಮಾಡಿತ್ತು.
ಅನಂತರದಲ್ಲಿ ಎರಡು ಕುಟುಂಬಗಳು ನ್ಯಾಯಾಲಯದ ಹೊರಗೆ ರಾಜಿ ಮಾಡಿಕೊಂಡಿದ್ದರು. ಶುಕ್ರವಾರ ಗಜೇಂದ್ರ ಸಿಂಗ್ ತೋಮರ್ ಕುಟುಂಬ ಗ್ರಾಮಕ್ಕೆ ಮರಳಿದ್ದರು. ಈ ವೇಳೆ ಧೀರ್ ಸಿಂಗ್ ತೋಮರ್ ಕುಟುಂಬ ಅವರ ಮೇಲೆ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ.
ಹತ್ಯೆಯಲ್ಲಿ ಭಾಗಿಯಾಗಿರುವ ಎಂಟು ಮಂದಿಯನ್ನು ಗುರುತಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ವರದಿ ಮಾಡಿದ್ದಾರೆ.







