ಸಮಗ್ರ ನ್ಯೂಸ್: ಕಳೆದ ರಾತ್ರಿ ಬೆಂಗಳೂರಿನ ಹಲವೆಡೆ ಸುರಿದ ಧಾರಾಕಾರ ಮಳೆಗೆ ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ನಗರದ ಹೊಸೂರು ಹೆದ್ದಾರಿ ಸಂಪೂರ್ಣ ಜಲಾವೃತವಾಗಿದ್ದು, ಕೆರೆಯಂತಾದ ಹೆದ್ದಾರಿಯಲ್ಲಿ ವಾಹನ ಸವಾರರು ಸಂಚಾರ ಪರದಾಡಿದರು.
ಎಲೆಕ್ಟ್ರಾನಿಕ್ ಸಿಟಿ ಸಮೀಪದ ವೀರಸಂದ್ರ ಸಿಗ್ನಲ್ ಬಳಿ ರಾತ್ರಿ ಸುರಿದ ಮಳೆಯಿಂದಾಗಿ ಸುಮಾರು ಐದಾರು ಅಡಿ ಮಳೆ ನೀರು ಪ್ರವಾಹ ಸೃಷ್ಟಿಸಿತ್ತು. ಬೆಳ್ಳಂಬೆಳಗ್ಗೆ ಬೆಂಗಳೂರು ಕಡೆ ಬರುತ್ತಿದ್ದ ಸಾವಿರಾರು ವಾಹನ ಸವಾರರು ಮುಂದೆ ಸಾಗಲಾಗದೆ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ಬೊಮ್ಮಸಂದ್ರ ಫ್ಲೈ ಓವರ್ನಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್ ತನಕ ಸುಮಾರು ಐದಾರು ಕಿಲೋಮೀಟರ್ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಮಾನ್ಸೂನ್ಗೂ ಮೊದಲು ಸುರಿಯುತ್ತಿರುವ ಮಳೆಗೆ ಹೆದ್ದಾರಿ ಕೆರೆಯಂತಾಗಿ ವಾಹನ ಸವಾರರು ಪರದಾಡುವಂತಾಗಿದೆ. ಸಿಂಗಸಂದ್ರ ಕೆರೆಗೆ ಹರಿಯಬೇಕಿದ್ದ ಮಳೆ ನೀರಿಗೆ ಸೂಕ್ತ ಸಂಪರ್ಕ ಕಾಲುವೆಗಳೇ ಇಲ್ಲದಿರುವುದು ಈ ಪ್ರವಾಹ ಪರಿಸ್ಥಿತಿಗೆ ಕಾರಣ ಎನ್ನಲಾಗುತ್ತಿದೆ. ಹೆದ್ದಾರಿ ಪ್ರಾಧಿಕಾರ, ಬೆಂಗಳೂರು ಮೆಟ್ರೋ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆ ಅಧಿಕಾರಿಗಳು ಮಳೆ ನೀರು ಸಾರಾಗವಾಗಿ ಹರಿದು ಹೋಗುವಂತೆ ಮಾಡಬೇಕಿದೆ.







