ಸಮಗ್ರ ನ್ಯೂಸ್: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಲೋಕಾಯುಕ್ತ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಲೋಕಾಯುಕ್ತರ ಬಲೆಗೆ ದೊಡ್ಡ ಭ್ರಷ್ಟ ತಿಮಿಂಗಿಲವೇ ಬಿದ್ದಿದೆ. ಭ್ರಷ್ಟನನ್ನು ಬೃಹತ್ ಗಾತ್ರದ ಹಣದೊಂದಿಗೆ ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಿದ್ದಾರೆ.
ಲೋಕಾಯುಕ್ತ ಬಲೆಗೆ ಬಿದ್ದ ವ್ಯಕ್ತಿ ಬೇರೆ ಯಾರೂ ಅಲ್ಲ ಬಿಜೆಪಿ ನಾಯಕ, ದಾವಣಗೆರೆ ಜಿಲ್ಲೆಯ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ, ಮಾಡಾಳು ಪ್ರಶಾಂತ್ ಎನ್ನಲಾಗಿದೆ. ಬೆಂಗಳೂರು ಜಲಮಂಡಳಿಯಲ್ಲಿ ಚೀಫ್ ಅಕೌಂಟೆಂಟ್ ಆಗಿರುವ ಮಾಡಾಳು ಪ್ರಶಾಂತ್, ಬರೋಬ್ಬರಿ 80 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಈ ವೇಳೆ 40 ಲಕ್ಷ ಹಣದೊಂದಿಗೆ ಮಾಡಾಳು ಪ್ರಶಾಂತ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
BWSSBಯಲ್ಲಿ ಚೀಫ್ ಅಕೌಂಟೆಂಟ್ ಆಗಿರುವ ಮಾಡಾಳು ಪ್ರಶಾಂತ್ ಕಚ್ಚಾ ವಸ್ತುಗಳ ಖರೀದಿ ಟೆಂಡರ್ಗಾಗಿ ಕೆಎಸ್ಡಿಎಲ್ ಅಧ್ಯಕ್ಷರ ಪರವಾಗಿ ಬರೋಬ್ಬರಿ 80 ಲಕ್ಷ ರೂಪಾಯಿ ಹಣ ಕೇಳಿದ್ದ ಎನ್ನಲಾಗಿದೆ. ಈ ವೇಳೆ 40 ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಲೋಕಾಯುಕ್ತ ಎಸ್ಪಿ ಅಶೋಕ್, ಇನ್ಸ್ಪೆಕ್ಟರ್ ಕುಮಾರ ಸ್ವಾಮಿ ನೇತೃತ್ವದಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದರು.
ಮೂಲಗಳ ಪ್ರಕಾರ ದಾಳಿಯ ವೇಳೆ ಒಂದು ಕೋಟಿ 62 ಲಕ್ಷ ರೂಪಾಯಿ ಹಣ ಸಿಕ್ಕಿದೆ ಎನ್ನಲಾಗಿದೆ. ಮಾಡಾಳು ಪ್ರಶಾಂತ್ 40 ಲಕ್ಷ ಹಣಕ್ಕೆ ಡಿಮಾಂಡ್ ಮಾಡಿದ್ದ. ಆದರೆ ದಾಳಿ ವೇಳೆ 40 ಲಕ್ಷ ಹಣದ ಜೊತೆ ಒಟ್ಟೂ 1 ಕೋಟಿ 62 ಲಕ್ಷ ರೂಪಾಯಿ ಹಣ ಪತ್ತೆ ಆಗಿದೆ ಎನ್ನಲಾಗುತ್ತಿದೆ. ಇನ್ನು ಹಲವು ಸ್ಥಳಗಳಲ್ಲಿ ದಾಳಿ ಮಾಡಲಾಗುತ್ತಿದ್ದು, ಸದ್ಯ ಕಚೇರಿಯಲ್ಲಿ ಸಿಕ್ಕಿರೋ ಹಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಚುನಾವಣೆ ಸಿದ್ಧತೆಯಲ್ಲಿದ್ದ ಮಾಡಾಳು ವಿರೂಪಾಕ್ಷಪ್ಪಗೆ ಶಾಕ್:
ಇನ್ನು ಮಾಡಾಳ್ ವಿರೂಪಾಕ್ಷಪ್ಪ ತಮ್ಮ ಇನ್ನೊಬ್ಬ ಮಗನನ್ನು ಚುನಾವಣೆಗೆ ನಿಲ್ಲಿಸಬೇಕು ಅಂತ ಸಿದ್ದತೆ ನಡೆಸುತ್ತಿದ್ದಾರೆ. ಚನ್ನಗಿರಿ ಕ್ಷೇತ್ರದಿಂದ ಪುತ್ರ ಮಲ್ಲಿಕಾರ್ಜುನನನ್ನು ಈ ಬಾರಿ ಬಿಜೆಪಿಯಿಂದ ನಿಲ್ಲಿಸಲು ಚನ್ನಗಿರಿ ಕ್ಷೇತ್ರದ ಹಾಲಿ ಶಾಸಕ ಮಾಡಾಳ್ ವಿರೂಪಾಕ್ಷ ಸಿದ್ದತೆ ಮಾಡಿಕೊಳ್ತಾ ಇದ್ದರು. ಇದರ ನಡುವೆ ಪ್ರಶಾಂತ್ ಮಾಡಳ್ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಶಾಸಕರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.







