ಸಮಗ್ರ ನ್ಯೂಸ್: ಶಿವಮೊಗ್ಗದಲ್ಲಿ ನಡೆದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವೂ ಸೇರಿದಂತೆ ವಿವಾದಾತ್ಮಕ, ಆಕ್ಷೇಪಾರ್ಹ ಬರಹಗಳನ್ನು ಪೋಸ್ಟ್ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದ ಆರೋಪದ ಮೇಲೆ ಮಂಗಳೂರು ಮುಸ್ಲಿಂ ಫೇಸ್ಬುಕ್ ಖಾತೆ ಕುರಿತಾದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ.
ಮಂಗಳೂರು ಮುಸ್ಲಿಂ ಪೇಜ್ನಲ್ಲಿ ಹತ್ಯೆಯಾದ ಹರ್ಷನ ಬಗ್ಗೆ ಆಕ್ಷೇಪಾರ್ಹ ಬರಹವನ್ನು ಪೋಸ್ಟ್ ಮಾಡಿದ್ದಲ್ಲದೆ ಸುದ್ದಿವಾಹಿನಿಯ ನಿರೂಪಕರು, ರಾಜ್ಯದ ಸಚಿವರ ಬಗ್ಗೆ ಆಕ್ಷೇಪಾರ್ಹ ಬರಹವನ್ನು ಪೋಸ್ಟ್ ಮಾಡಲಾಗಿತ್ತು ಎನ್ನಲಾಗುತ್ತಿದೆ. ಆದ್ದರಿಂದ ಈ ಪೋಸ್ಟ್ ಬಗ್ಗೆ ಮಂಗಳೂರು ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಫೇಸ್ಬುಕ್ ಖಾತೆಯನ್ನು ಬ್ಲಾಕ್ ಮಾಡಲು ಮಂಗಳೂರು ಪೊಲೀಸರು ಫೇಸ್ಬುಕ್ ಸಂಸ್ಥೆಗೆ ಮಾಹಿತಿ ಕೇಳಿದ್ದರು. ಇದೀಗ ಈ ಪೇಜ್ ಸಮಗ್ರ ತನಿಖೆಗೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ.






