ಕೊಟ್ವಾಲಿ: ಫೇಸ್ಬುಕ್ನಿಂದ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಗೆ ಸಿಲುಕಿ ಬಾಲಕನ ಜತೆ ಯುವತಿ ಓಡಿಹೋಗಿರುವ ಘಟನೆ ಪಶ್ಚಿಮಬಂಗಾಳದಲ್ಲಿ ನಡೆದಿದೆ.
ನಾಡಿಯಾದ ಕೃಷ್ಣನಗರ ಕೊಟ್ವಾಲಿಯ 15 ವರ್ಷದ ಬಾಲಕ ಮತ್ತು ಶಾಂತಿನಗರದ 22 ವರ್ಷದ ಯುವತಿ ಇಬ್ಬರೂ ಪ್ರೀತಿಯ ಬಲೆಗೆ ಬಿದ್ದು ಮದುವೆಯಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಇವರಿಬ್ಬರೂ ಫೇಸ್ಬುಕ್ ಮೂಲಕ ಪರಿಚಯವಾಗಿದ್ದರು. ನಂತರ ಮಾತುಕತೆಯ ವೇಳೆ ಪರಸ್ಪರ ಲವ್ ಆಗಿದೆ. ಮನೆಯವರಿಗೆ ತಿಳಿಸಿದರೆ ಖಂಡಿತ ಮದುವೆಗೆ ಒಪ್ಪುವುದಿಲ್ಲ ಎಂದುಕೊಂಡು ಇಬ್ಬರೂ ಉತ್ತರ ಪ್ರದೇಶಕ್ಕೆ ಹೋಗುವ ಯೋಜನೆ ರೂಪಿಸಿದ್ದಾರೆ. ಅದರಂತೆ ಇದೇ 25ರಂದು ಮನೆಯಿಂದ ಓಡಿ ಹೋಗಿರುವ ಇವರು ಮದುವೆಯನ್ನೂ ಮಾಡಿಕೊಂಡಿದ್ದಾರೆ.
ಮದುವೆಯ ನಂತರ ವಾಪಸಾಗುತ್ತಿದ್ದ ವೇಳೆ ಅವರಿಬ್ಬರೂ ಮದುವೆ, ಓಡಿಹೋದ ಬಗ್ಗೆ ಪರಸ್ಪರ ರೈಲಿನಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಇದನ್ನು ಕೇಳಿಸಿಕೊಂಡ ಅಕ್ಕಪಕ್ಕದವರಿಗೆ ಸಂದೇಹ ಬಂದಿದೆ. ಹುಡುಗ ಇನ್ನೂ ತೀರಾ ಚಿಕ್ಕವನಂತೆ ಕಾಣುತ್ತಿದ್ದುದರಿಂದ ಅವರಿಗೆ ಈ ಜೋಡಿಯ ಬಗ್ಗೆ ಸಂದೇಹ ವ್ಯಕ್ತವಾಗಿದೆ. ಮಾತಿನಲ್ಲಿಯೇ ಅವರಿಬ್ಬರೂ ಮದುವೆಯಾಗಿರುವುದೂ ತಿಳಿದಿದೆ.
ಕೂಡಲೇ ಅವರು ಅನುಮಾನದಿಂದ ಚೈಲ್ಡ್ಲೈನ್ಗೆ ಮಾಹಿತಿ ನೀಡಿದ್ದಾರೆ. ಅದಾಗಲೇ ಇಬ್ಬರೂ ಕಾಣೆಯಾಗಿರುವ ಬಗ್ಗೆ ಪಾಲಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಆಧಾರದ ಮೇಲೆ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.






