ಸಮಗ್ರ ನ್ಯೂಸ್: ಸುರತ್ಕಲ್ ನ ಮುಕ್ಕದ ಶ್ರೀನಿವಾಸ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ 8 ಮಂದಿ ಅಕ್ರಮ ಬಾಂಗ್ಲಾದೇಶದ ಪ್ರಜೆಗಳನ್ನು ಸುರತ್ಕಲ್ ಪೊಲೀಸರು ಗುರುವಾರ ರಾತ್ರಿ ವಶಕ್ಕೆ ಪಡೆದುಕೊಂಡು ವಿಚಾರಣೆಯ ಬಳಿಕ ಬಂಧಿಸಿದ್ದಾರೆ.
ಬಂಧಿತರನ್ನು ಮುಹಮ್ಮದ್ ಮುಖ್ತಾರ್ ಅಲಿ ( 36), ಮುಹಮ್ಮದ್ ರಾಕಿಬುರ್ ಹುಸೈನ್ (44), ಮುಹಮ್ಮದ್ ಅಝರುಲ್ ಇಸ್ಲಾಂ ( 36), ಮುಹಮ್ಮದ್ ಝೈದ್ ಹುಸನ್ (18), ಮುಹಮ್ಮದ್ ಬಿಲಾಲ್ ಹುಸೈನ್ (36), ಮುಹಮ್ಮದ್ ಹಾಸಿಬುಲ್ ಹಸನ್ ಶನ್ಟೊ ( 37), ಮುಹಮ್ಮದ್ ಸಮೀವುಲ್ ಹಸನ್ ( 23), ಮುಹಮ್ಮದ್ ಸೈಬುರ್ರಹ್ಮಾನ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇವರೆಲ್ಲರೂ ಮೂರು ತಿಂಗಳ ಹಿಂದೆ ಅಕ್ರಮವಾಗಿ ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಮೂಲಕ ಭಾರತಕ್ಕೆ ಬಂದು ನಂತರ ಅಲ್ಲಿನ ವಿಳಾದಲ್ಲಿದ್ದವರ ಆಧಾರ್ ಕಾರ್ಡ್ಗಳಿಗೆ ಅವರ ಭಾವಚಿತ್ರ ಅಂಟಿಸಿ ಕಲರ್ ಜೆರಾಕ್ಸ್ ಪಡೆದುಕೊಂಡು ಎರಡು ತಿಂಗಳಿನಿಂದ ಮುಕ್ಕದಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುದೀರ್ ಕುಮಾರ್ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.
ಮುಕ್ಕದ ನಿರ್ಮಾಣ ಹಂತದ ಕಡ್ಡಡಗಳ ಕಾಮಗಾರಿಯಲ್ಲಿ ಬಾಂಗ್ಲಾದೇಶದ ಪ್ರಜೆಗಳು ಅಕ್ರಮವಾಗಿ ವಾಸಿಸುತ್ತಿ ರುವ ಕುರಿತು ಸುರತ್ಕಲ್ ಪೊಲೀಸ್ ಉಪ ನಿರೀಕ್ಷಕ ರಘು ನಾಯ್ಕ್ ಅವರಿಗೆ ಖಚಿತ ಮಾಹಿತಿ ಬಂದಾಕ್ಷಣ ತಂಡ ದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಎರಡು ನಿರ್ಮಾಣ ಹಂತದ ಕಟ್ಟಡಗಳ ಬಳಿ ಜೋಪಡಿ ಹಾಕಿ ವಾಸವಿದ್ದ ಸುಮಾರು 54 ಮಂದಿಯನ್ನು ಪರಿಶೀಲನೆ ಒಳಪಡಿಸಿದ್ದರು. ಈ ಪೈಕಿ 8ಮಂದಿಗೆ ಸೇರಿದ ಬಾಂಗ್ಲಾದೇಶದ ಗುರುತಿನ ಚೀಚಿಗಳು ಪತ್ತೆಯಾಗಿತ್ತು. ಬಳಿಕ ಎಲ್ಲಾ ಎಂಟು ಮಂದಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಹಿರಿಯ ಅಧಿಕಾರಿಗಳ ಮೂಲಕ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ ಮಾಹಿತಿ ನೀಡಲಾಗಿದ್ದು, ಅವರ ಸೂಚನೆಯ ಮೇರೆಗೆ ಎಲ್ಲರನ್ನೂ ಬಂಧಿಸಿ ಪೊಲೀಸ್ ಠಾಣೆಯಲ್ಲಿಡಲಾಗಿತ್ತು. ಬಳಿಕ ಎಲ್ಲರನ್ನೂ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ ಸುಪರ್ದಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.







