ಸಮಗ್ರ ನ್ಯೂಸ್: ವಾಹನ ಸವಾರರು ಮತ್ತು ವಾಣಿಜ್ಯ ಗ್ರಾಹಕರಿಗೆ ನಿರಾಳ ಸುದ್ದಿ ಸಿಕ್ಕಿದೆ. ದೇಶದಲ್ಲಿ ಇಂಧನ ಪೂರೈಕೆ ವ್ಯವಸ್ಥೆಯು ಸಂಪೂರ್ಣವಾಗಿ ಸುಧಾರಿಸಿರುವ ಹಿನ್ನೆಲೆಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲಿದ್ದ ಎಲ್ಲ ರದ್ದತಿ ಹಾಗೂ ನಿರ್ಬಂಧಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹೊಸ ಆದೇಶವು ಜುಲೈ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.
ಮಧ್ಯಪ್ರಾಚ್ಯದಲ್ಲಿ ಇತ್ತೀಚೆಗೆ ನಡೆದ ಸಂಘರ್ಷಗಳಿಂದಾಗಿ ಜಾಗತಿಕ ಸರಬರಾಜು ವ್ಯವಸ್ಥೆಯಲ್ಲಿ ಏರುಪೇರಾಗಿತ್ತು. ಇದರಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಕೊರತೆ ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಜೂನ್ 12 ರಂದು ತಾತ್ಕಾಲಿಕ ನಿಯಂತ್ರಣ ಆದೇಶವನ್ನು ಜಾರಿಗೆ ತಂದಿತ್ತು. ಇದರ ಅನ್ವಯ, ಚಿಲ್ಲರೆ ಮಾರಾಟ ಬಂಕ್ಗಳಲ್ಲಿ ವಾಹನವೊಂದಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಮಾತ್ರ ನೀಡುವ ಮಿತಿ ಹೇರಲಾಗಿತ್ತು.
ಆದರೆ, ಪ್ರಸ್ತುತ ದೇಶದ ಇಂಧನ ದಾಸ್ತಾನು ಮತ್ತು ಪೂರೈಕೆ ಸ್ಥಿತಿಗತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿರುವ ಕೇಂದ್ರ ಸರ್ಕಾರ, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಇನ್ನು ಮುಂದೆ ಈ ನಿಯಂತ್ರಣಗಳ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇಂಡಿಯನ್ ಆಯಿಲ್ (IOCL), ಭಾರತ್ ಪೆಟ್ರೋಲಿಯಂ (BPCL) ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಸಂಸ್ಥೆಗಳ ಚಿಲ್ಲರೆ ಮಳಿಗೆಗಳ ಮೂಲಕ ನ್ಯಾಯಯುತ ವಿತರಣೆಗಾಗಿ ವಿಧಿಸಲಾಗಿದ್ದ ಈ ನಿಯಮಗಳನ್ನು ಜುಲೈ 1 ರಿಂದ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಇದರಿಂದಾಗಿ ಕೈಗಾರಿಕಾ ವಲಯ ಹಾಗೂ ಸಾಮಾನ್ಯ ವಾಹನ ಸವಾರರು ಇನ್ಮುಂದೆ ಯಾವುದೇ ಮಿತಿಯಿಲ್ಲದೆ ಇಂಧನ ಪಡೆಯಬಹುದಾಗಿದೆ.








