ಸಮಗ್ರ ನ್ಯೂಸ್: ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ಬಹುಕೋಟಿ ಮೌಲ್ಯದ ಕಳ್ಳತನ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಹೊಸ ಮತ್ತು ಆಘಾತಕಾರಿ ಸಾಕ್ಷ್ಯಗಳು ಬೆಳಕಿಗೆ ಬಂದಿವೆ.
ತನಿಖಾ ಸಂಸ್ಥೆಗಳು ಮುಖ್ಯ ಆರೋಪಿಗಳು ಹಾಗೂ ಅವರ ನಿಕಟವರ್ತಿಗಳ ಬ್ಯಾಂಕ್ ಖಾತೆಗಳು ಮತ್ತು ಆಸ್ತಿಪಾಸ್ತಿಗಳನ್ನು ಪರಿಶೀಲಿಸಿದಾಗ, ಕಳ್ಳತನ ನಡೆದ ಕೆಲವೇ ದಿನಗಳಲ್ಲಿ ಅವರ ಆಸ್ತಿ ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಸುಮಾರು 100 ಪಟ್ಟು ಹೆಚ್ಚಿರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಅದೇ ವೇಳೆ, ಡಿಜಿಟಲ್ ಸಾಕ್ಷ್ಯಗಳನ್ನು ನಾಶಪಡಿಸಲು ಆರೋಪಿಗಳು ಸಂಚು ರೂಪಿಸಿದ್ದರೆಂಬ ಶಂಕೆ ವ್ಯಕ್ತವಾಗಿದೆ. ಬಂಧನಕ್ಕೊಳಗಾಗುವ ಮುನ್ನವೇ ವಾಟ್ಸಾಪ್ ಚಾಟ್ಗಳು, ಕರೆ ದಾಖಲೆಗಳು ಹಾಗೂ ಲೊಕೇಶನ್ ಡೇಟಾವನ್ನು ಡಿಲೀಟ್ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಈ ಮಾಹಿತಿಯನ್ನು ಮರುಪಡೆಯಲು ವಿಧಿವಿಜ್ಞಾನ ಪ್ರಯೋಗಾಲಯ (FSL) ನೆರವು ಪಡೆಯಲಾಗುತ್ತಿದೆ.
ಅತಿ ಭದ್ರತಾ ವಲಯದಲ್ಲಿರುವ ಮಂದಿರದ ಗರ್ಭಗುಡಿಯ ಸಮೀಪವೇ ಕಳ್ಳತನ ನಡೆದಿರುವುದರಿಂದ, ಹೊರಗಿನವರಿಂದ ಮಾತ್ರ ಈ ಕೃತ್ಯ ಸಾಧ್ಯವಲ್ಲ ಎಂಬ ಅನುಮಾನವೂ ಮೂಡಿದೆ. ಒಳಗಿನವರ ಸಹಕಾರವಿಲ್ಲದೆ ಇದು ನಡೆದಿರಲು ಸಾಧ್ಯವಿಲ್ಲ ಎಂಬ ದಿಕ್ಕಿನಲ್ಲಿ ತನಿಖೆ ಸಾಗುತ್ತಿದೆ.
ಚಿನ್ನಾಭರಣ, ಕಾಣಿಕೆ ಹಣ ಹಾಗೂ ಇತರ ವಸ್ತುಗಳನ್ನು ಆರೋಪಿಗಳು ಎಲ್ಲಿ ಅಡಗಿಸಿದ್ದಾರೆ ಅಥವಾ ಯಾರಿಗೆ ಮಾರಾಟ ಮಾಡಿದ್ದಾರೆ ಎಂಬುದರ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮಂದಿರದ ಭದ್ರತಾ ವ್ಯವಸ್ಥೆ ಹಾಗೂ ಟ್ರಸ್ಟ್ ಅಧಿಕಾರಿಗಳ ಪಾತ್ರದ ಬಗ್ಗೆಯೂ ಪರಿಶೀಲನೆ ಮುಂದುವರಿದಿದ್ದು, ಪ್ರಕರಣವು ಮತ್ತಷ್ಟು ಮಹತ್ವದ ತಿರುವು ಪಡೆಯುವ ಸಾಧ್ಯತೆ ಇದೆ.







