ಸಮಗ್ರ ನ್ಯೂಸ್: ನೂತನ ಸಚಿವರಿಗೆ ಖಾತೆ ಹಂಚಿಕೆಯಾಗ್ತಿದ್ದಂತೆ ಫುಲ್ ಅಲರ್ಟ್ ಆಗಿದ್ದಾರೆ. ಖಾತೆ ಹಂಚಿಕೆಯಾದ ಒಂದೇ ಗಂಟೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು ಟಿ ಖಾದರ್ ಅವರು ಜಯನಗರ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟಿದ್ದಾರೆ.
ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬೆಂಗಳೂರಿನ ಜಯನಗರ ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ ಯುಟಿ ಖಾದರ್ ಅವರು, ಆಸ್ಪತ್ರೆ ಸಿಬ್ಬಂದಿ ಬಗ್ಗೆ ಪರಿಶೀಲನೆ, ಸ್ವಚ್ಛತೆ, ರೋಗಿಗಳಿಗೆ ಚಿಕಿತ್ಸೆ ವಿಧಾನ, ತುರ್ತು ಚಿಕಿತ್ಸಾ ಘಟಕದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಪರಿಶೀಲನೆ ನೂತನ ಸಚಿವ ಖಾದರ್ ಇಳಿದಿದ್ದಾರೆ. ಹಾಜರಾತಿಯಲ್ಲಿ ಗೈರಾಗಿರುವ ಸಿಬ್ಬಂದಿಗಳಿಗೆ ಖಾದರ್ ಚಾಟಿ ಬೀಸಿದ್ದಾರೆ. ಅಲ್ಲದೇ ರೋಗಿಗಳ ಬಳಿಯೂ ತೆರಳಿ ಸಚಿವ ಖಾದರ್ ಮಾಹಿತಿ ನೀಡಿದ್ದಾರೆ. ತಡರಾತ್ರಿ ಆಸ್ಪತ್ರೆ ಆವರಣದಲ್ಲಿದ್ದ ಪ್ರತಿಯೊಬ್ಬರಿಂದಲೂ ಖಾದರ್ ಮಾಹಿತಿ ಪಡೆದಿದ್ದಾರೆ.
ಸಚಿವ ಖಾದರ್ ಭೇಟಿ ವೇಳೆ ಗರ್ಭಿಣಿ ನೆಲದ ಮೇಲೆ ಕುಳಿತಿರುವುದನ್ನ ಕಂಡು ಖಾದರ್ ಗರಂ ಆಗಿದ್ದಾರೆ. ಮೇಲೆ ಕೂರಿಸಿ ಎಂದು ವೈದ್ಯರು ಹಾಗೂ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡ್ರು. ಹೆರಿಗೆ ಕೊಠಡಿ, ಸಿಸೇರಿಯನ್ ವಾರ್ಡ್ ಸೇರಿದಂತೆ ಎಲ್ಲೆಡೆ ಪರಿಶೀಲನೆ ನಡೆಸಿದ ಖಾದರ್ ಅವ್ರು ಸಿಬ್ಬಂದಿ ಕೊರತೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಗೆ ಆರೋಗ್ಯ ಸೌಧದಲ್ಲಿ ಆರೋಗ್ಯ ಇಲಾಖೆ ಪರಿಶೀಲನಾ ಸಭೆಯನ್ನ ಸಚಿವ ಯು ಟಿ ಖಾದರ್ ಕರೆದಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದ್ದು, ಇಲಾಖೆ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.








