ಸಮಗ್ರ ನ್ಯೂಸ್ : ಧರ್ಮಶಾಲಾದಲ್ಲಿ ಮೇ 26 ರಂದು ನಡೆದ ಕ್ವಾಲಿಫೈಯರ್-1 ಪಂದ್ಯದಲ್ಲಿ 92 ರನ್ಗಳ ಭರ್ಜರಿ ಗೆಲುವಿನೊಂದಿಗೆ ಆರ್ಸಿಬಿ ಫೈನಲ್ಗೆ ಲಗ್ಗೆ ಇಟ್ಟಿದೆ. ಐಪಿಎಲ್ನಲ್ಲಿ ಸತತ ಎರಡನೇ ಟ್ರೋಫಿ ಗೆಲ್ಲುವ ಭರವಸೆಯನ್ನು ಅಭಿಮಾನಿಗಳಲ್ಲಿ ಆರ್ಸಿಬಿ ಜೀವಂತವಾಗಿರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಉತ್ತಮ ಆರಂಭ ಪಡೆದುಕೊಂಡಿತು. ಬ್ಯಾಟಿಂಗ್ನಲ್ಲಿ ಅಬ್ಬರಿಸಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. 255 ರನ್ಗಳ ಗುರಿ ಬೆನ್ನತ್ತಿದ ಜಿಟಿ ಬ್ಯಾಟಿಂಗ್ನಲ್ಲಿ ಮಕಾಡೆ ಮಲಗಿತು. 162 ರನ್ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
ಬೃಹತ್ ರನ್ ಗುರಿ ತಲುಪುವ ಭರವಸೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಗುಜರಾತ್ ಬ್ಯಾಟಿಂಗ್ನಲ್ಲಿ ಎಡವಿತು. ಆರಂಭದಲ್ಲೇ ಮೂರು ಫೋರ್ಗಳನ್ನು ಹೊಡೆದು ಲಯ ಕಂಡುಕೊಂಡ ಸಾಯಿ ಸುದರ್ಶನ್ (14) ಬ್ಯಾಟ್ ಕೈಬಿಟ್ಟು ಹಿಟ್ ವಿಕೆಟ್ ಆಗಿ ಹೊರ ನಡೆದರು. ಇವರ ಬೆನ್ನಲ್ಲೇ ಭುವನೇಶ್ವರ್ ಮಾರಕ ಬೌಲಿಂಗ್ ಎದುರಿಸಲು ಆಗದೇ ಶುಭಮನ್ ಗಿಲ್ ಕೇವಲ 2 ರನ್ಗೆ ಕ್ಲೀನ್ ಬೌಲ್ಡ್ ಆದರು. ಈ ನಡುವೆ ತಂಡಕ್ಕೆ ಆಸರೆಯಾಗಿ ಯಾರು ಕೂಡ ನಿಲ್ಲಲಾಗಲಿಲ್ಲ. ಜೋಶ್ ಬಟ್ಲರ್ 29, ನಿಶಾಂತ್ ಸಿಂಧು 5, ವಾಷಿಂಗ್ಟನ್ ಸುಂದರ್ ಕೇವಲ 8 ರನ್ ಅಷ್ಟೇ ಗಳಿಸಿ ನಿರ್ಗಮಿಸಿ ನಿರಾಸೆ ಮೂಡಿಸಿದರು. 51 ರನ್ ಇದ್ದಾಗಲೇ ತಂಡ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಜೇಸನ್ ಹೋಲ್ಡರ್ ಶೂನ್ಯ ಸುತ್ತಿ ನಿರ್ಗಮಿಸಿದರು. ಸೋಲು ಖಚಿತವಾಗಿದ್ದರೂ ಸಮಾಧಾನಕರ ಆಟವಾಡಿದ ರಾಹುಲ್ ತೆವಾಟಿಯಾ ಅರ್ಧಶತಕ (68) ಗಳಿಸಿದರು. ಆರ್ಸಿಬಿ ಬೌಲರ್ಗಳ ದಾಳಿಗೆ ಕಂಗೆಟ್ಟ ಗುಜರಾತ್ ಅಂತಿಮವಾಗಿ 19.3 ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 162 ರನ್ ಗಳಿಸಿ ಸೋತು ಶರಣಾಯಿತು.






