ಸಮಗ್ರ ನ್ಯೂಸ್ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ನಡೆಯುತ್ತಿರುವ ಉತ್ಖನನ ಕಾರ್ಯದ ವೇಳೆ ಮತ್ತಷ್ಟು ಆಳ್ವಾರ್ ಕಾಲದ ವಿಗ್ರಹಗಳು ಪತ್ತೆಯಾಗಿವೆ.
ಹಂಪಿಯ ಹಜಾರ ರಾಮ ದೇವಸ್ಥಾನದ ಸಮೀಪ ಉತ್ಖನನ ಕಾರ್ಯ ನಡೆಯುತ್ತಿದ್ದು, ಈ ವೇಳೆ ಹತ್ತಾರು ವಿಗ್ರಹಗಳು ಹೊರಬಂದಿವೆ. ಪತ್ತೆಯಾದ ಮೂರ್ತಿಗಳು ಆಳ್ವಾರ್ ಸಮಾಜದ ಜನರ ವಿಗ್ರಹಗಳಾಗಿರುವ ಸಾಧ್ಯತೆ ಇದೆ ಎಂದು ಪುರಾತತ್ವ ತಜ್ಞರು ತಿಳಿಸಿದ್ದಾರೆ.
1565ರ ತಾಳಿಕೋಟೆ ಕದನದ ನಂತರ ವಿಜಯನಗರ ಸಾಮ್ರಾಜ್ಯ ಪತನಗೊಂಡಿತ್ತು. ಆಕ್ರಮಣದ ವೇಳೆ ಸಾವಿರಾರು ದೇವರ ಮೂರ್ತಿಗಳು ಹಾಗೂ ವಿಗ್ರಹಗಳನ್ನು ಧ್ವಂಸ ಮಾಡಲಾಗಿತ್ತು.
ಪ್ರಸ್ತುತ ಪತ್ತೆಯಾಗಿರುವ ವಿಗ್ರಹಗಳ ಮೇಲೂ ದಾಳಿ ನಡೆಸಿ ಅವುಗಳನ್ನು ಮಣ್ಣಿನಲ್ಲಿ ಮುಚ್ಚಿಹಾಕಿರುವ ಸಾಧ್ಯತೆಯಿದೆ. ಉತ್ಖನನ ಕಾರ್ಯವನ್ನು ಅತ್ಯಂತ ಸೂಕ್ಷ್ಮ ಹಾಗೂ ವೈಜ್ಞಾನಿಕ ವಿಧಾನದಲ್ಲಿ ಮುಂದುವರಿಸಲಾಗುತ್ತಿದೆ.







