ಸಮಗ್ರ ನ್ಯೂಸ್: ರಾಜ್ಯದ ಅನ್ನದಾತರಿಗೆ ಹವಾಮಾನ ಇಲಾಖೆಯು ಅತ್ಯಂತ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಪ್ರತಿ ವರ್ಷ ಜೂನ್ ತಿಂಗಳ ಆರಂಭದಲ್ಲಿ ಬರುವ ಮುಂಗಾರು ಮಳೆ, ಈ ಬಾರಿ ವಾಡಿಕೆಗಿಂತ ಒಂದು ವಾರ ಮುಂಚಿತವಾಗಿಯೇ ಅಪ್ಪಳಿಸಲಿದೆ. ಮೇ 26ರಂದೇ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, ಜೂನ್ ಮೊದಲ ವಾರದಲ್ಲೇ ಕರ್ನಾಟಕದ ಮಣ್ಣನ್ನು ತಣಿಸಲಿದೆ. ಹವಾಮಾನ ಇಲಾಖೆಯ ಈ ಮುನ್ಸೂಚನೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ, ಮುಂದಿನ 3 ದಿನಗಳ ಕಾಲ ಇಡೀ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮಳೆಯ ಜೊತೆಗೆ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಜನಜೀವನ ಸ್ವಲ್ಪ ಮಟ್ಟಿಗೆ ಅಸ್ತವ್ಯಸ್ತಗೊಳ್ಳುವ ಲಕ್ಷಣಗಳಿವೆ.
ಮಳೆಯ ತೀವ್ರತೆ ಹೆಚ್ಚಾಗಲಿರುವ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್’ (Yellow Alert) ಘೋಷಿಸಲಾಗಿದೆ.
ಮುಂಗಾರು ಮಾರುತಗಳು ಈಗಾಗಲೇ ಅಂಡಮಾನ್ ದ್ವೀಪವನ್ನು ತಲುಪಿವೆ. ಆದರೆ, ಮೇ 17ರಿಂದ ಹಿಂದೂ ಮಹಾಸಾಗರದ ಮೂಲಕ ಸಾಗಿ ಬರುವ ಮುಂಗಾರು ಮಾರುತಗಳು ಕೊಂಚ ದುರ್ಬಲಗೊಳ್ಳುವ ಲಕ್ಷಣಗಳೂ ಕಾಣಿಸುತ್ತಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.







