ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯನವರ ವಿರುದ್ದ ವಿ.ಸೋಮಣ್ಣ ಅವರು ಸೋಲುಕಂಡಿದ್ದರು. ಇದಾದ ಬಳಿಕ ಬಿ.ಎಸ್ ಯಡಿಯೂರಪ್ಪ ಹಾಗೂ ವಿ ಸೋಮಣ್ಣ ನಡುವೆ ವೈಮನಸ್ಸು ಬೆಳೆದಿತ್ತು. ಇದೀಗ ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ನಿನ್ನೆ ಡಾಲರ್ಸ್ ಕಾಲನಿಯ ಬಿ.ಎಸ್ ಯಡಿಯೂರಪ್ಪನವರ ನಿವಾಸಕ್ಕೆ ವಿ ಸೋಮಣ್ಣ ಅವರು ಆಗಮಿಸಿದ್ದು, ಇಬ್ಬರು ಕೂಡ ಮುನಿಸು ಮರೆತು ಮತ್ತೆ ಒಂದಾಗಿದ್ದಾರೆ.
ಇಬ್ಬರ ರಾಜಿ ಸಂಧಾನದಲ್ಲಿ ಎಂ.ಡಿ.ಲಕ್ಷ್ಮಿನಾರಾಯಣ್, ಶೆಟ್ಟರ್ ಯಶಸ್ವಿಯಾಗಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಸೋಮಣ್ಣ, ಬಿಎಸ್ವೈ ನಡುವೆ ಮಾತುಕತೆ ನಡೆದಿತ್ತು. ಅಷ್ಟೇ ಅಲ್ಲ, ಕೇಂದ್ರ ಬಿಜೆಪಿ ನಾಯಕರು ಸಹ ಇಬ್ಬರ ಜೊತೆ ಮಾತುಕತೆ ನಡೆಸಿದ್ದಾರೆ. ಜಗದೀಶ್ ಶೆಟ್ಟರ್ ಮತ್ತು ತುಮಕೂರು ಸಂಸದ ಬಸವರಾಜ್ ಜೊತೆ ಸೋಮಣ್ಣ ಮಾತಾಡಿದ್ದರು. ಇದೀಗ ವಿಧಾನಸಭೆ ಟಿಕೆಟ್ ಹಂಚಿಕೆ ವೇಳೆ ಶುರುವಾಗಿದ್ದ ಇಬ್ಬರ ನಡುವಿನ ವೈಮನಸ್ಸು ಇಂದು ಅಂತ್ಯವಾಗಿದೆ. ಅದು ಅಲ್ಲದೆ ಲೋಕಸಭೆ ಚುನಾವಣೆ ಸನಿಹದಲ್ಲೇ ಇಬ್ಬರು ಬಲಿಷ್ಠ ನಾಯಕರು ಮತ್ತೆ ಒಂದಾಗಿದ್ದಾರೆ
ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದ ವಿ ಸೋಮಣ್ಣ, ‘ನಾವು ಟಿಕೆಟ್ ಬಗ್ಗೆ ಚರ್ಚೆ ಮಾಡಿಲ್ಲ, ಸೌಹಾರ್ದ ಯುತವಾಗಿ ಮಾತಾಡಿದ್ದೇವೆ. ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಬೇಕು. ಈ ಹಿನ್ನಲೆ ಕರ್ನಾಟಕದಲ್ಲಿ 28 ಸ್ಥಾನಗಳನ್ನು ಗೆಲ್ಲಬೇಕು ಎನ್ನುವ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ. ಕೆಲವು ವಿಚಾರಗಳನ್ನು ನಿಮ್ಮ ಮುಂದೆಯೇ ಮಾತಾಡಿದ್ದೇನೆ. ದೇಶಕ್ಕಿಂತ ನಾವ್ಯಾರೂ ದೊಡ್ಡವರಲ್ಲ ಎಂದರು. ಇನ್ನು ಯಡಿಯೂರಪ್ಪ ಮೇಲಿನ ಮುನಿಸು ಎಲ್ಲವೂ ಮುಗಿಸಿದೆ. ಮೇಲಿನವರು ಏನು ತೀರ್ಮಾನ ಮಾಡುತ್ತಾರೆ ಅದರ ಪ್ರಕಾರ ಆಗುತ್ತದೆ. ನಾನು ಯಾವತ್ತಾದ್ರೂ ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂದು ಹೇಳಿದ್ದೀನಾ?, ನಿಮ್ಮಲ್ಲಿ ಜಗಳಗಳಿಲ್ಲವಾ, ಇವೆಲ್ಲ ಮನೆ ಜಗಳ. ಈಗ ಎಲ್ಲವೂ ಸರಿಹೋಗಿದೆ ಎಂದರು.







