ಸಮಗ್ರ ನ್ಯೂಸ್: ಕುಮಾರಪರ್ವತ ಚಾರಣ ವೇಳೆ ಸಿಗುವ ಗಿರಿಗದ್ದೆ ಮಹಾಲಿಂಗ ಭಟ್ಟರನ್ನು ಚಾರಣಿಗರಿಗೆ ಪರಿಚಯಿಸಬೇಕಾದ್ದಿಲ್ಲ. ಚಾರಣಿಗರ ಪಾಲಿನ ಅನ್ನದಾತರಾಗಿರುವ ಮಹಾಲಿಂಗ ಭಟ್ಟರು ಬುಧವಾರ(ಡಿ.20) ಅವರು ನಿಧನ ಹೊಂದಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಿಂದ 4 ಕಿಲೋ ಮೀಟರ್ ದೂರದಲ್ಲಿ ಕುಮಾರ ಪರ್ವತದ ಹಾದಿಯ ಗಿರಿಗದ್ದೆಯಲ್ಲಿದ್ದ ಮಹಾಲಿಂಗೇಶ್ವರ ಭಟ್ಟರು ಇತ್ತೀಚಿನವರೆಗೂ ಅಲ್ಲೇ ವಾಸವಾಗಿದ್ದರು. ಚಾರಣಿಗರ ಪಾಲಿನ ಅನ್ನದಾತ, ಅನ್ನದೇವರಾಗಿದ್ದರು. ಗಿರಿಗದ್ದೆ ಭಟ್ಟರು ಅಂತಲೇ ಫೇಮಸ್ಸಾಗಿದ್ದ ಇವರು ಕಳೆದ ಕೆಲವು ತಿಂಗಳುಗಳ ಹಿಂದೆ ಇವರ ಸಹೋದರ ವೆಂಕಟ್ರಮಣ ಜೋಯಿಸರನ್ನು ಅಗಲಿದ್ದರು.
ಈ ಕುಟುಂಬ ಗಿರಿಗದ್ದೆಗೆ ಬಂದದ್ದು 1974 ರಲ್ಲಿ. ಗಿರಿಗದ್ದೆಯಲ್ಲಿ ಮಣ್ಣಿನ ಮನೆ , ಕೊಟ್ಟಿಗೆ , ಹಟ್ಟಿ ನಿರ್ಮಿಸಿಕೊಂಡು ಏಕಾಂತ ಬದುಕು ಸಾಗಿಸಿದರು. ಅಡಿಕೆ ತೋಟ, ತರಕಾರಿ ಕೃಷಿ ಎಲ್ಲವೂ ಅವರ ಏಕಾಂತ ಬದುಕಿಗೆ ಸ್ಫೂರ್ತಿ ನೀಡಿದವು. ಆಗ ಅವರಿಗೆ ಸಾಥ್ ನೀಡಿದವರು ಚಾರಣಿಗರು. ಚಾರಣಿಗರಿಗೆ ಆಶ್ರಯದಾತರಾಗಿಯೂ ಗಿರಿಗದ್ದೆ ಪರಮೇಶ್ವರ ಭಟ್ಟರು ಹೆಚ್ಚು ಆತ್ಮೀಯರಾದರು.
ಪರಮೇಶ್ವರ ಭಟ್ಟರೊಂದಿಗೆ ಅವರ ಮಕ್ಕಳೂ ಗಿರಿಗದ್ದೆ ವಾಸ ಇಷ್ಟ ಪಟ್ಟರು. ಕಾಲಾನಂತರ ಅಂದರೆ ಪರಮೇಶ್ವರ ಭಟ್ಟರಿಗೆ ವೃದ್ಧಾಪ್ಯ ಬಂದಾಗ, ಗಿರಿಗದ್ದೆ ಮನೆಯಲ್ಲಿ ಮಹಾಲಿಂಗ ಭಟ್ಟರು ಹಾಗೂ ನಾರಾಯಣ ಭಟ್ಟರು ಚಾರಣಿಗರ ಅನ್ನದಾತರಾದರು. ಮಹಾಲಿಂಗ ಭಟ್ಟರೊಂದಿಗೆ ಅವರ ಅತ್ತೆ ಪರಮೇಶ್ವರಿ ಅಮ್ಮನೂ ಗಿರಿಗದ್ದೆ ಆಗಮಿಸಿದ್ದರು.
ಅತ್ತೆ ಪರಮೇಶ್ವರಿ ಅಮ್ಮನೊಂದಿಗೆ ಮಹಾಲಿಂಗ ಭಟ್
ಗಿರಿಗದ್ದೆಗೆ ಸುಬ್ರಹ್ಮಣ್ಯಕ್ಕೆ ಪ್ರತೀ ದಿನ ಅಂದು ಬರುತ್ತಿದ್ದ ಅವರು ಸುಬ್ರಹ್ಮಣ್ಯದಿಂದ ಹೊರಡುವಾಗ 25 ಕೆಜಿ ಅಕ್ಕಿ , ಬೇಳೆ ಇತ್ಯಾದಿಗಳನ್ನು ಹೊತ್ತುಕೊಂಡು 6 ಕಿಮೀ ಬೆಟ್ಟ ಏರುತ್ತಾ ಕಾಲ್ನಡಿಗೆ ಪಯಣ. ಕುಮಾರಪರ್ವತಕ್ಕೆ ಹೋಗುವ ಚಾರಣಿಗರು , ಹೋಗುವ ವೇಳೆ ಅಥವಾ ಬರುವ ವೇಳೆ ಭಟ್ಟರ ಮನೆಯಲ್ಲಿ ಊಟ ಮಾಡಿಯೇ ಮುಂದೆ ಹೋಗುತ್ತಾರೆ. ಮುಂಗಡವಾಗಿ ಭಟ್ಟರಿಗೆ ಮಾಹಿತಿ ನೀಡಿದರೆ ಬೆಳಗ್ಗೆ ಸುಮಾರು 11 ಗಂಟೆಯ ಹೊತ್ತಿಗೆ ಅಡುಗೆ ಸಿದ್ದ. ಕೆಲವು ಚಾರಣಿಗರು ಗಿರಿಗದ್ದೆ ಮನೆಯಲ್ಲೇ ವಾಸ್ತವ್ಯ ಹೂಡಿ ಮರುದಿನ ಬೆಳಗ್ಗೆ ಕುಮಾರಪರ್ವತ ಏರುವವರೂ ಇದ್ದಾರೆ.
ಒಟ್ಟಿನಲ್ಲಿ ಬೆಟ್ಟದ ಮೇಲಿನ ಈ ಭಟ್ಟರ ಬದುಕು ನಿಜಕ್ಕೂ ಸಾಹಸ ಬದುಕಾಗಿತ್ತು. ನಗರದ ಸಂಪರ್ಕವಿಲ್ಲದೆ ನಗರವಾಸಿಗಳ ಸಂಪರ್ಕದೊಂದಿಗೆ ಬದುಕುವ ಇವರದು ತಪಸ್ಸಿನ ಜೀವನ ಅದಾಗಿತ್ತು. ಈಗ ಎಲ್ಲವನ್ನೂ ಬಿಟ್ಟು ಕಾಣದ ಲೋಕಕ್ಕೆ ಪಯಣಿಸಿದ್ದಾರೆ. ಚಾರಣಿಗರ ಇಷ್ಟದ ಭಟ್ಟರು ಇನ್ನಿಲ್ಲ.
ಮಹಾಲಿಂಗ ಭಟ್ಟರವರು ಮೂವರು ಮಕ್ಕಳು, ಬಂಧುಗಳು ಹಾಗೂ ಸಾವಿರಾರು ಅಭಿಮಾನಿಗಳನ್ನು ಅಗಲಿದ್ದಾರೆ.
ಕೃಪೆ: ರೂರಲ್ ಮಿರರ್

















