ಸಮಗ್ರ ನ್ಯೂಸ್: ಕೇರಳದ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಶಬರಿಮಲೆಯಲ್ಲಿ ಶುಚಿತ್ವವನ್ನು ಕಾಪಾಡುವಂತೆ ಹೈಕೋರ್ಟ್ ಆದೇಶ ನೀಡಿದೆ.
ಅಲ್ಲದೇ ಪ್ರಕರಣ ಸಂಬಂಧ ಎಡಿಜಿಪಿ ಅವರು ಮಂಗಳವಾರದಂದು ಹೈಕೋರ್ಟ್ನಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ. ಇಬ್ಬರು ವಕೀಲರು ಸಲ್ಲಿಸಿರುವ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿದೆ.
ಇದಕ್ಕೂ ಮುನ್ನ, ಇಬ್ಬರು ವಕೀಲರು ಶಬರಿಮಲೆ ಅಯ್ಯಪ್ಪನ ಸನ್ನಿಧಾನಕ್ಕೆ ತೆರಳಿದ್ದರು. ಈ ವೇಳೆ, ಅಲ್ಲಿನ ಅವ್ಯವಸ್ಥೆಯನ್ನು ಕಂಡು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಶಬರಿಮಲೆಗೆ ಬರುವ ಅಯ್ಯಪ್ಪ ಭಕ್ತರಿಗೆ ಬೇಕಾದ ಕುಡಿಯುವ ನೀರಿನ ಸೌಲಭ್ಯ ದೇವಾಲಯದಲ್ಲಿ ಒದಗಿಸಲಾಗಿಲ್ಲ. ಜೊತೆಗೆ ಇಲ್ಲಿನ ವಿಶ್ರಾಂತಿ ಗೃಹಗಳಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯಗಳಿಲ್ಲ. ಅಲ್ಲದೇ ಇಲ್ಲಿನ ದೇವರ ದರ್ಶನಕ್ಕೆ ಹೋಗುವ ಸರತಿ ಸಾಲು ಪದ್ಧತಿ ಸರಿಯಿಲ್ಲ ಎಂದು ಹೇಳಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್, ಶಬರಿಮಲೆಯಲ್ಲಿ ಶುಚಿತ್ವವನ್ನು ಕಾಪಾಡುವಂತೆ ಹೇಳಿದೆ. ಅಲ್ಲದೆ ಸರತಿ ಸಾಲಿನಲ್ಲಿ ಉಂಟಾಗುವ ಸಮಸ್ಯೆಯನ್ನು ಆದಷ್ಟು ಬೇಗ ನಿವಾರಿಸುವಂತೆ ಸೂಚಿಸಿದೆ. ಒಂದು ವೇಳೆ ಶಬರಿಮಲೆಯಲ್ಲಿ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಏರಿಕೆ ಉಂಟಾದರೆ, ಭಕ್ತಾದಿಗಳಿಗೆ ಬೇಕಾದ ಸೂಕ್ತ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಹೈಕೋರ್ಟ್ ಹೇಳಿದೆ.
ಕಳೆದ ವರ್ಷ ಶಬರಿಮಲೆಯಲ್ಲಿ ಈ ರೀತಿ ನೂಕುನುಗ್ಗಲಿನ ಪರಿಸ್ಥಿತಿ ಉಂಟಾಗಿರಲಿಲ್ಲ. ಇದೀಗ ಸುಮಾರು 5000ದಿಂದ 10000 ಜನರು ಯಾವುದೇ ಬುಕಿಂಗ್ ಇಲ್ಲದೆ ದೇವರ ದರ್ಶನ ಪಡೆಯುತ್ತಿದ್ದಾರೆ ಎಂದು ಹೈಕೋರ್ಟ್ ಹೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು, ಸನ್ನಿಧಾನಕ್ಕೆ ಬರುವ ಎಲ್ಲ ಅಕ್ರಮ ರಸ್ತೆಗಳನ್ನು ಮುಚ್ಚಲಾಗಿದೆ. ಅಲ್ಲದೆ ಭಕ್ತರಿಗಾಗಿ ದರ್ಶನದ ಸಮಯವನ್ನು 1 ಗಂಟೆ ಹೆಚ್ಚಳ ಮಾಡಲಾಗಿದೆ. ಸದ್ಯ ಶಬರಿಮಲೆಯಲ್ಲಿ ನೂಕುನುಗ್ಗಲಿನ ಪರಿಸ್ಥಿತಿ ಇಲ್ಲ ಎಂದು ವಿವರಿದ್ದಾರೆ.
ಶಬರಿಮಲೆ ಭದ್ರತಾ ಉಸ್ತುವಾರಿಯಾಗಿರುವ ಎಡಿಜಿಪಿ ಮಂಗಳವಾರ ಖುದ್ದಾಗಿ ಪ್ರಕರಣದ ವಿಚಾರಣೆಗೆ ಹಾಜರಾಗಲಿದ್ದಾರೆ. ಈ ವೇಳೆ ಶಬರಿಮಲೆಯಲ್ಲಿ ಉಂಟಾಗುತ್ತಿರುವ ನೂಕುನುಗ್ಗಲು ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಗೆ ಮಾಹಿತಿ ನೀಡಲಿದ್ದಾರೆ.





