ಸಮಗ್ರ ನ್ಯೂಸ್: ಮನೆ ಬಳಿ ಮೇಯಲು ಬಂದ ಹಸುಗಳ ಮೇಲೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗುಣಿ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ವೃದ್ಧೆ ಜೋಸೆಫ್ ಗ್ರೇಸ್ ಎಂಬುವವರು ಕೃತ್ಯ ಎಸಗಿದ್ದಾರೆ. ಜೋಸೆಫ್ ಗ್ರೇಸ್ ಆ್ಯಸಿಡ್ ಎರಚಿದ್ದರಿಂದ 18 ಹಸುಗಳಿಗೆ ಸುಟ್ಟ ಗಾಯಗಳಾಗಿವೆ. ಜೋಸೆಫ್ ಗ್ರೇಸ್ ಮನೆ ಬಳಿಯಿರುವ ಖಾಲಿ ಜಾಗದಲ್ಲಿ ಕಳೆದ ಮೂರು ದಿನಗಳಿಂದ ಹಸುಗಳು ಮೇಯಲು ಬರುತ್ತಿದ್ದವು. ಹೀಗಾಗಿ ಜೋಸೆಫ್ ಗ್ರೇಸ್ ನಿರಂತರವಾಗಿ ಆ್ಯಸಿಡ್ ಎರಚುತ್ತಿದ್ದಾರೆ.
ನಾಗಣ್ಣ ಎಂಬುವರಿಗೆ ಸೇರಿದ ನಾಲ್ಕು ಹಸು, ಶ್ರೀರಾಮ, ಕೃಷ್ಣಾ, ಪ್ರಕಾಶ್ ಎಂಬುವರಿಗೆ ಸೇರಿದ ತಲಾ ಮೂರು ಹಸು, ರಾಜಣ್ಣ, ಗಂಗಮ್ಮ ಎಂಬುವರಿಗೆ ಸೇರಿದ ತಲಾ ಎರಡು ಹಸು, ಮದನ್ ಎಂಬುವರಿಗೆ ಸೇರಿದ ಒಂದು ಹಸುಗೆ ಗಾಯವಾಗಿದೆ. ನೋವು ತಾಳಲಾರದೆ ಮೂಕ ಹಸುಗಳು ರೋಧಿಸುತ್ತಿವೆ. ಈ ಬಗ್ಗೆ ಹಸುಗಳ ಮಾಲೀಕರು ಜೋಸೆಫ್ ಗ್ರೇಸ್ ಅವರನ್ನು ಪ್ರಶ್ನಿಸಿದಾಗ ಬಾತ್ ರೂಂಗೆ ಬಳಸುವ ಆ್ಯಸಿಡ್ ಎರಚಿದ್ದೇನೆ ಎಂದಿದ್ದಾರೆ.
ಸುಟ್ಟ ಗಾಯಗಳಿಂದ ಹಸುಗಳು ಹಾಲು ಕೊಡುತ್ತಿಲ್ಲ, ನೋವಿನಿಂದ ಬಳಲುತ್ತಿವೆ. ನಮಗೆ ನ್ಯಾಯ ಕೊಡಿಸಿ ಎಂದು ಹಸುಗಳ ಮಾಲೀಕರು ಸೋಲದೇವನಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.







