ಸಮಗ್ರ ನ್ಯೂಸ್: ಮಾಂಸಹಾರಿ ಹಾಗೂ ಬಿರಿಯಾನಿ ಹೊಟೇಲ್ಗಳ ಮೇಲೆ ದಾಳಿ ನಡೆಸಿದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತೆರಿಗೆ ವಂಚನೆ ಮಾಡುತ್ತಿದ್ದ ಒಟ್ಟು ಏಳು ಬಿರಿಯಾನಿ ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಹೊಟೇಲ್ ಮಾಲೀಕನ ಬಳಿ 1.47 ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು, ಆ ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಹೋಟೆಲ್ ಮಾಲೀಕ ಸರಕು ಮತ್ತು ಸೇವಾ ತೆರಿಗೆ ವಂಚನೆ ಮಾಡ್ತಿದ್ದ ಎಂದು ತಿಳಿದು ಬಂದಿದ್ದು, ಆತನ ಮನೆಯನ್ನು ಶೋಧನೆ ಮಾಡುವ ವೇಳೆ ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿದೆ.
ಹೊಸಕೋಟೆ ಬಳಿಯ ಕೆಲವು ಹೊಟೇಲ್ ಮಾಲೀಕರು ಜಿಎಸ್ ಟಿ ವಂಚನೆ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ 50ಕ್ಕೂ ಹೆಚ್ಚು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಕ್ಷಯ್ ಧಮ್ ಬಿರಿಯಾನಿ, ರಾಜ್ ಧಮ್ ಬಿರಿಯಾನಿ, ಮಣಿ ಧಮ್ ಬಿರಿಯಾನಿ, ಆನಂದ್ ಧಮ್ ಬಿರಿಯಾನಿ, ರಾಜ್ ಧಮ್ ಬಿರಿಯಾನಿ ಸೇರಿದಂತೆ ವಿವಿಧ ಕಡೆಗಳಲ್ಲಿ ಶೋಧ ನಡೆಸಿದರು.
ಮಾಂಸಹಾರಿ ಹಾಗೂ ಬಿರಿಯಾನಿ ಹೊಟೇಲ್ ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಹೋಟೆಲ್ಗಳ ಮಾಲೀಕರು ಯುಪಿಐ ಪಾವತಿ ಖಾತೆಗಳನ್ನು ಬದಲಾಯಿಸಿ ವಹಿವಾಟು ನಡೆಸ್ತಿದ್ರು. ಈ ಮೂಲಕ ತೆರಿಗೆ ವಂಚನೆ ಮಾಡುತ್ತಿದ್ರು. ಒಬ್ಬ ಹೋಟೆಲ್ ಮಾಲೀಕ 30 QR ಕೋಡ್ ಹೊಂದಿದ್ದ. ಹೊಟೇಲ್ ಮಾರಾಟ ವಹಿವಾಟಿನ ಸರಿಯಾದ ಲೆಕ್ಕಪತ್ರ ಕೂಡಾ ನಿರ್ವಹಿಸ್ತಿರಲಿಲ್ಲ. ಬಿಲ್ ಗಳನ್ನು ಸರಿಯಾಗಿ ನೀಡದೆ ತೆರಿಗೆ ವಂಚನೆ ಮಾಡುತ್ತಿದ್ದನೆಂದು ತಿಳಿದು ಬಂದಿದೆ.
ಸಾಮಾನ್ಯವಾಗಿ ಈ ಹೋಟೆಲ್ಗಳು ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಯಾವಾಗ್ಲೂ ಇಲ್ಲಿ ಗ್ರಾಹಕರ ರಷ್ ಇರುತ್ತದೆ. ಹೀಗಾಗಿ ತೆರಿಗೆ ಸರಿಯಾಗಿ ಪಾವತಿಸದೆ ವಂಚನೆ ಮಾಡುತ್ತಿದ್ದರು. ಈ ಹಿನ್ನೆಲೆವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ರಾಜ್ ಧಮ್ ಬಿರಿಯಾನಿ ಮಾಲೀಕ ಶ್ರೀನಿವಾಸ್ ಹಾಗೂ ರಾಜ್ನನ್ನು ವಶಕ್ಕೆ ಪಡೆದು 1 ಕೋಟಿ 40 ಲಕ್ಷ ರೂಪಾಯಿ ನಗದನ್ನು ಸೀಜ್ ಮಾಡಿದ್ದಾರೆ.
ತೆರಿಗೆ ವಂಚನೆ ಮಾಡುತ್ತಿದ್ದ ಒಟ್ಟು ಏಳು ಬಿರಿಯಾನಿ ಅಂಗಡಿಗಳ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ತೆರಿಗೆ ಪಾವತಿಸದೆ ವಂಚನೆ ಮಾಡಿದ ಹೋಟೆಲ್ಗಳ ಮಾಲೀಕರ ಮೇಲೆ ಪ್ರಕರಣದ ದಾಖಲಾಗಿದೆ.







