ಸಮಗ್ರ ನ್ಯೂಸ್: ಧರ್ಮಸ್ಥಳ ಸಮೀಪದ ಮಣ್ಣಸಂಕ ಬಳಿ ಅತ್ಯಾಚಾರ ಮತ್ತು ಹತ್ಯೆಗೊಳಗಾದ ಸೌಜನ್ಯಳ ನ್ಯಾಯಕ್ಕಾಗಿ ಸುಳ್ಯದಲ್ಲಿ ಪ್ರತಿಭಟನಾ ಸಭೆಯಲ್ಲಿ ಮನಕಲಕುವ ಘಟನೆ ನಡೆದಿದೆ. ನೋವಿನ ನಡುವೆ ಮಗಳ ಸಾವಿನ ನ್ಯಾಯಕ್ಕಾಗಿ ದಿ. ಸೌಜನ್ಯಳ ತಾಯಿ ಕುಸುಮಾವತಿ ಸೆರಗೊಡ್ಡಿ ಬೇಡಿದ್ದು ಸೇರಿದ ಮಂದಿ ಕಣ್ಣೀರಾದರು.
ತಮ್ಮ ಮಗಳ ಮೇಲೆ ನಡೆದಿರುವ ಅತ್ಯಾಚಾರ ಮತ್ತು ಕೊಲೆಯ ಕ್ಷಣವನ್ನು ನೆನೆದು ಗದ್ಗದಿತರಾಗಿ ಮಾತು ಆರಂಭಿಸಿದ ಕುಸುಮಾವತಿ, ನನ್ನ ಮಗಳ ಪ್ರಾಣ ಹೋಗುವ ಸಂದರ್ಭ ಆ ಮಗು ಅಮ್ಮ ಎಂದು ಎಷ್ಟು ಬಾರಿ ನನ್ನನ್ನು ಕರೆದಿರಬಹುದು. ಆ ಪ್ರಾಣ ಹೋಗುವ ಸಂದರ್ಭದಲ್ಲಿ ಎಷ್ಟು ವೇದನೆಯನ್ನು ಅನುಭವಿಸಿರಬಹುದು. ನನ್ನ ಮಗಳನ್ನು ಕೊಂದವರಿಗೆ ಅವಳನ್ನು ತಿನ್ನಬಹುದಿತ್ತಲ್ಲವೇ? ಯಾಕಾಗಿ ಅವಳನ್ನು ಅಲ್ಲಿ ಅರ್ಧ ಬಿಟ್ಟು ಹೋಗಿದ್ದಾರೆ?, ಎಂದು ಕಣ್ಣೀರು ಹಾಕುತ್ತಾ ಮಗಳನ್ನು ನೆನೆದು ನ್ಯಾಯ ಕೊಡಿ ಎಂದು ಅಂಗಲಾಚಿ ಭಿಕ್ಷೆಯನ್ನು ಬೇಡಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ತನ್ನ ಸೆರಗನ್ನು ಒಡ್ಡಿ ಕೇಳುತ್ತಿದ್ದೇನೆ, ನನ್ನ ಮಗಳಿಗೆ ನ್ಯಾಯ ಕೊಡಿಸಿ, ಬೇರೇನೂ ಬೇಡ, ಎಂದು ಅತ್ತಾಗ ಸಭೆಯಲ್ಲಿ ಸೇರಿದ್ದ ಅಷ್ಟೂ ಮಂದಿ ಕಣ್ಣೀರು ಹಾಕಿದ್ದು ನಿಜಕ್ಕೂ ಮನ ಮಿಡಿಯುವಂತಿತ್ತು.







