ಸಮಗ್ರ ನ್ಯೂಸ್: ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಈ ವಾರ ಉಪಮುಖ್ಯಮಂತ್ರಿ, ಕಾಂಗ್ರೆಸ್ ನ ಪ್ರಮುಖ ನಾಯಕ ಡಿಕೆ ಶಿವಕುಮಾರ್ ಅತಿಥಿಯಾಗಿದ್ದಾರೆ. ಇದರೊಂದಿಗೆ ಈ ಕಾರ್ಯಕ್ರಮದ ಸೀಸನ್ ಕೊನೆಯಾಗಲಿದೆ.
ಈ ಬಗ್ಗೆ ಈಗ ವಾಹಿನಿಯೇ ಅಧಿಕೃತವಾಗಿ ಪ್ರೋಮೋ ಹರಿಯಬಿಟ್ಟಿದೆ. ಡಿಕೆಶಿ ಕಳೆದ ವಾರವೇ ಶೋನಲ್ಲಿ ಕಾಣಿಸಿಕೊಳ್ಳಬೇಕಾಗಿತ್ತು. ಆದರೆ ಪೂರ್ವನಿರ್ಧರಿತ ಕಾರ್ಯಕ್ರಮಗಳಿಂದಾಗಿ ಚಿತ್ರೀಕರಣ ಸಾಧ್ಯವಾಗಿರಲಿಲ್ಲ. ಹೀಗಾಗಿ ಕಳೆದ ವಾರ ಶೋ ರದ್ದಾಗಿತ್ತು. ಆದರೆ ಈಗ ಡಿಕೆಶಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಇದೇ ವಾರದ ಅಂತ್ಯಕ್ಕೆ ಡಿಕೆಶಿ ಭಾಗಿಯಾಗಿರುವ ಎಪಿಸೋಡ್ ಪ್ರಸಾರವಾಗಲಿದೆ.
ಸಾಧಕರ ಸೀಟಿನಲ್ಲಿ ಕುಳಿತಿರುವ ಡಿ.ಕೆ. ಶಿವಕುಮಾರ್ ತಮ್ಮ ಬದುಕನ್ನು ವೀಕೆಂಡ್ ಟೆಂಟ್ ನಲ್ಲಿ ರಿವೈಂಡ್ ಮಾಡಿಕೊಂಡು ನೋಡಿದ್ದಾರೆ.
ಕೇವಲ ಶಿವಕುಮಾರ್ ಮಾತ್ರವಲ್ಲ, ಅವರ ಪತ್ನಿ, ಮಕ್ಕಳು, ಕುಟುಂಬದ ಸದಸ್ಯರು, ಸ್ನೇಹಿತರು, ರಾಜಕಾರಣಿಗಳು ಹೀಗೆ ಅನೇಕರು ಈ ಎಪಿಸೋಡ್ ನಲ್ಲಿ ಕಾಣಿಸಿಕೊಂಡಿದ್ದು, ಅವರೆಲ್ಲರೂ ಡಿಕೆಶಿ ಬದುಕಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ನಟ ರಮೇಶ್ ಅರವಿಂದ್ ಜೊತೆ ಈಗಾಗಲೇ ವೀಕೆಂಡ್ ಟೆಂಟ್ ನಲ್ಲಿ ರಮ್ಯಾ, ಡಾಲಿ, ಪ್ರೇಮ್, ಜೈ ಜಗದೀಶ್, ಪ್ರಭುದೇವ ಸೇರಿದಂತೆ ಹಲವು ಗಣ್ಯರು ತಮ್ಮ ಜೀವನವನ್ನು ರಿವೈಂಡ್ ಮಾಡಿಕೊಂಡು ನೋಡಿದ್ದಾರೆ. ಇದೀಗ ಟ್ರಬಲ್ ಶೂಟರ್ ಡಿಕೆಶಿ ಅವರು ಸಾಧಕರ ಸೀಟ್ ಮೇಲೆ ಕೂರಿಸಿಕೊಂಡು ಅವರ ಕಥೆ ಕೇಳಿದ್ದಾರೆ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ರಾಜಕೀಯ ವ್ಯಕ್ತಿಗಳು ಬರುತ್ತಿರುವುದು ಇದೇ ಮೊದಲೇನೂ ಅಲ್ಲ. ಹಲವು ಸೀಸನ್ ಗಳಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು.








